ಕಾಲೇಜು ಉಪನ್ಯಾಸಕರಿಗೆ ಪರಿಷ್ಕೃತ ವೇತನ
ನವದೆಹಲಿ, ಜುಲೈ 27 (ಯುಎನ್ಐ)– ವಿಶ್ವವಿದ್ಯಾಲಯಗಳ ಹಾಗೂ ಕಾಲೇಜು ಉಪನ್ಯಾಸಕರ ಪರಿಷ್ಕೃತ ವೇತನವನ್ನು ಸರ್ಕಾರ ಇಂದು ಘೋಷಿಸಿದೆ. ಜತೆಗೆ ನಿವೃತ್ತಿ ವಯಸ್ಸನ್ನು 62ಕ್ಕೆ ಏರಿಸಿ, ಕಾಲೇಜುಗಳಲ್ಲಿ ಪ್ರೊಫೆಸರ್ಗಳ ಹುದ್ದೆಗಳನ್ನೂ ಸೃಷ್ಟಿಸಲಾಗಿದೆ.
ಮೂರು ತಿಂಗಳ ಹಿಂದೆ ಸರ್ಕಾರ ಘೋಷಿಸಿದ್ದ ವೇತನ ಶ್ರೇಣಿಯನ್ನು ದೇಶದಾದ್ಯಂತ ಶಿಕ್ಷಕರು ವಿರೋಧಿಸಿದ್ದರು. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಲಹೆಗೆ ಅನುಗುಣವಾಗಿ ವೇತನ ಪರಿಷ್ಕರಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ವೇತನವನ್ನು ಸರ್ಕಾರ ಇದೀಗ ಘೋಷಿಸಿದೆ.
***
ವರ್ಗವಾದ ಸ್ಥಳಕ್ಕೆ ಹೋಗದ ಕೃಷಿ ಅಧಿಕಾರಿಗಳ ಅಮಾನತು
ಬೆಂಗಳೂರು, ಜುಲೈ 27– ವರ್ಗಾವಣೆಯಾದ ಸ್ಥಳಗಳಿಗೆ ಹೋಗಿ ಕರ್ತವ್ಯದ ಮೇಲೆ ಹಾಜರಾಗದ ಕೃಷಿ ಇಲಾಖೆಯ ಒಂಬತ್ತು ಅಧಿಕಾರಿಗಳೂ ಸೇರಿದಂತೆ ಒಟ್ಟು 22 ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕರ್ತವ್ಯದ ಮೇಲೆ ಹಾಜರಾಗಲು ನೀಡಿದ್ದ ಗಡುವು ಮುಗಿದು ಹತ್ತು ದಿನಗಳು ಕಳೆದ ನಂತರವೂ ವರ್ಗಾವಣೆಯಾದ ಸ್ಥಳಗಳಲ್ಲಿ ಕೆಲಸಕ್ಕೆ ಹಾಜರಾಗದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಒಂಬತ್ತು ಮಂದಿ ಕೃಷಿ ಅಧಿಕಾರಿಗಳು, ಹನ್ನೊಂದು ಮಂದಿ ಕೃಷಿ ಸಹಾಯಕರು ಹಾಗೂ ಇಬ್ಬರು ಗುಮಾಸ್ತರನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ಕೃಷಿ ಸಚಿವ ಸಿ. ಬೈರೇಗೌಡ ಅವರು ಇಂದು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.