ಮೂರು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಸಿದ್ಧತೆ
ನವದೆಹಲಿ, ನ. 29– ಬಿಜೆಪಿ ವಿರೋಧಿ ಅಲೆಯಿಂದಾಗಿ ರಾಜಸ್ಥಾನ, ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರು ಡಿಸೆಂಬರ್ ಒಂದರಂದು ಸಭೆ ಸೇರುವರು ಎಂದು ಪಕ್ಷದ ವಕ್ತಾರರು ಇಂದು ರಾತ್ರಿ ತಿಳಿಸಿದರು.
_____________________
ಸುಂದರ ಕನ್ನಡ ಭವನ ನಾಡಿಗೆ ಸಮರ್ಪಣೆ
ಬೆಂಗಳೂರು, ನ. 29: ಹಿತವಾದ ಚಳಿಯ ಎಳೆ ಬಿಸಿಲಿನ ಹಗಲಲ್ಲಿ, ಪ್ರಖ್ಯಾತ ಗಾಯಕ–ಗಾಯಕಿಯರಿಂದ ಹರಿದ ಗಾನ ಲಹರಿ ಹಿನ್ನೆಲೆಯ ಅದ್ಧೂರಿ ಸಮಾರಂಭದಲ್ಲಿ ಸಾಂಸ್ಕೃತಿಕ ಸೌಧ ‘ಕನ್ನಡ ಭವನ’ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ ಇಂದು ಇಲ್ಲಿ ನಾಡಿಗೆ ಸಮರ್ಪಿತವಾಯಿತು.
ವಿಶ್ವ ಕನ್ನಡ ಸಮ್ಮೇಳನ ಮುಗಿದ ನಂತರ 1984ರಿಂದ ಆರಂಭವಾಗಿ ಆರಕ್ಕೂ ಹೆಚ್ಚು ಬಾರಿ ಕೇವಲ ಅಡಿಗಲ್ಲು ಸಮಾರಂಭದ ಹಂತದಲ್ಲಿ ಮಾತ್ರ ಉಳಿದಿದ್ದ ಭವನದ ಅಜ್ಞಾತವಾಸ ಇದರೊಂದಿಗೆ ಮುಗಿದಂತಾಯಿತು.
ಮಳೆಯಿಂದಾಗಿ ರಾಜ್ಯೋತ್ಸವ ದಿನ ಉದ್ಘಾಟನೆ ಆಗದ ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಿರ್ಮಾಣವಾದ ಈ ಭವನಕ್ಕೆ ಇನ್ನು ಕೇವಲ ಕಾಲು ಭಾಗ ಮಾತ್ರ ಕಾಮಗಾರಿ ಮುಗಿಯಬೇಕಿದೆ.