ಮತ್ತೆ ಚುನಾವಣೆ: ಇಂದು ನಿರ್ಧಾರ
ನವದೆಹಲಿ, ಏ. 25– ಪರ್ಯಾಯ ಸರ್ಕಾರ ರಚನೆಯ ವಿರೋಧ ಪಕ್ಷಗಳ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಉಸ್ತುವಾರಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಇಂದು ರಾತ್ರಿ ಕರೆದು, ನಾಳೆ ಕೇಂದ್ರ ಸಂಪುಟ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಕೇಂದ್ರ ಸಂಪುಟ ಸಭೆ 12ನೇ ಲೋಕಸಭೆಯನ್ನು ವಿಸರ್ಜಿಸಿ ಆದಷ್ಟು ಬೇಗ ಮಧ್ಯಂತರ ಚುನಾವಣೆಗೆ ಶಿಫಾರಸು ಮಾಡುವ ನಿರ್ಣಯ ಕೈಗೊಳ್ಳುವ ಸಂಭವ ಇದೆ. ಇದರೊಂದಿಗೆ ಒಂಬತ್ತು ದಿನಗಳ ರಾಜಕೀಯ ಅನಿಶ್ಚಿತತೆಯ ಬಳಿಕ ದೇಶವು ಅನಿವಾರ್ಯವಾಗಿ ಮಧ್ಯಂತರ ಚುನಾವಣೆಗೆ ಸಜ್ಜಾಗುವ ಸ್ಥಿತಿಗೆ ಬಂದಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸರ್ಕಾರ ರಚನೆ ತಮ್ಮ ಪಕ್ಷದಿಂದ ಸಾಧ್ಯವಿಲ್ಲ ಎಂದು ತಿಳಿಸಿದ ನಂತರ ರಾಷ್ಟ್ರಪತಿಯವರು ವಾಜಪೇಯಿ ಅವರಿಗೆ ಕರೆ ಕಳುಹಿಸಿದ್ದರು.
***
ಸಿಪಿಎಂ ‘ಹತಾಶ ಯತ್ನ’ಕ್ಕೆ ಬಿಜೆಪಿ ಖಂಡನೆ
ನವದೆಹಲಿ, ಏ. 25 (ಪಿಟಿಐ)– ಕಾಂಗ್ರೆಸ್, ಸಿಪಿಎಂ ಹಾಗೂ ಇತರ ಪಕ್ಷಗಳು ಸರ್ಕಾರ ರಚನೆ ಯತ್ನದಲ್ಲಿ ದೇಶಕ್ಕೆ ವಂಚಿಸಲು ತೊಡಗಿವೆ ಎಂದು ಬಿಜೆಪಿ ಟೀಕಿಸಿದೆ.
ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಸರ್ಕಾರ ರಚನೆಗೆ ಯತ್ನಿಸುತ್ತಿರುವ ಹತಾಶ ಪ್ರಯತ್ನವನ್ನು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಒಪ್ಪಲೇಬಾರದು ಎಂದು ಬಿಜೆಪಿಯ ವಕ್ತಾರ ವೆಂಕಯ್ಯನಾಯ್ಡು ಇಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.