ರಾಯಚೂರು, ಫೆ. 2– ನಗರದ ವಿಜಯನಗರ ಬಡಾವಣೆಯಲ್ಲಿ ಮನೆಯೊಂದರ ಬಾಗಿಲು ಒಡೆದು ದರೋಡೆಗೆ ಯತ್ನಿಸುತ್ತಿದ್ದ ಡಕಾಯಿತರ ತಂಡದ ಮೇಲೆ ಅಲ್ಲಿನ ನಿವಾಸಿಯೊಬ್ಬರು ಗುಂಡು ಹಾರಿಸಿದ್ದರಿಂದ ದುಷ್ಕರ್ಮಿಗಳು ಪರಾರಿಯಾದ ಘಟನೆ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.
ದಳ ಮೂರನೇ ಅಭ್ಯರ್ಥಿ ಯಾರು?
ಬೆಂಗಳೂರು, ಫೆ. 2– ರಾಜ್ಯಸಭಾ ಚುನಾವಣೆಗೆ ಜನತಾದಳದಿಂದ ಮೂರನೇ ಅಭ್ಯರ್ಥಿ ಯಾರಾಗಬಹುದು ಎಂಬುದು ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದ ಸಂಸದೀಯ ಮಂಡಲಿ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ, ಮೂರನೇ ಅಭ್ಯರ್ಥಿ ಹಿಂದುಳಿದ ವರ್ಗಕ್ಕೆ ಸೇರಿದವರು ಆಗಿರಬೇಕು ಎಂಬುದರ ಬಗ್ಗೆ ಮಾತುಕತೆ ನಡೆದಿದೆ.
ಆದರೆ ಹಿಂದುಳಿದ ವರ್ಗದವರಲ್ಲಿ ಯಾರಿಗೆ ಆದ್ಯತೆ ನೀಡಬೇಕು? ಈ ಜಿಜ್ಞಾಸೆಯಿಂದಾಗಿ ಯಾರು ಅಭ್ಯರ್ಥಿ ಎಂಬುದು ಸ್ಪಷ್ಟವಾಗಿಲ್ಲ. ಪಕ್ಷದ ಹಿರಿಯ ಮುಖಂಡರೊಬ್ಬರ ಪ್ರಕಾರ, ಇನ್ನು ಒಂದೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಆಗಲಿದೆ.