ನವದೆಹಲಿ, ಸೆ. 25– ನೂತನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರನ್ನು ಭೇಟಿಯಾಗಿ ಇಂದು ಮಾತುಕತೆ ನಡೆಸಿದ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್. ಬಂಗಾರಪ್ಪ ಅವರು, ತಮ್ಮ ಪಕ್ಷವನ್ನು ವಿಲೀನಗೊಳಿಸುವ ಮೂಲಕ ಮತ್ತೆ ಕಾಂಗ್ರೆಸ್ಗೆ ಸೇರುವ ಸಾಧ್ಯತೆಗಳು ಹೆಚ್ಚಾಗಿವೆ.
ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ ಪಿ.ವಿ. ನರಸಿಂಹರಾವ್ ವರ್ತನೆಯಿಂದ ಬೇಸರಗೊಂಡು ಕಾಂಗ್ರೆಸ್ ಬಿಟ್ಟು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದ ಬಂಗಾರಪ್ಪ ಈಗ ಕಾಂಗ್ರೆಸ್ಗೆ ಮರಳಲು ಹಾದಿ ಸುಗಮವಾದಂತಾಗಿದೆ.
ಅಧ್ಯಕ್ಷರಾಗಿ ನೇಮಕವಾದ ಕೇಸರಿ ಅವರನ್ನು ಅಭಿನಂದಿಸಲೆಂದೇ ಇಲ್ಲಿಗೆ ಆಗಮಿಸಿದ್ದ ಬಂಗಾರಪ್ಪ, ಕೇಸರಿ ಅವರ ನಿವಾಸದಲ್ಲಿ ಅವರೊಂದಿಗೆ ಚರ್ಚಿಸಿ ನಂತರ ಬೆಂಗಳೂರಿಗೆ ವಾಪಸ್ಸಾದರು.