ವೀರಪ್ಪನ್ ವಿರುದ್ಧ ಕಾರ್ಯತಂತ್ರ: ಕರ್ನಾಟಕ, ತಮಿಳುನಾಡು ಅಧಿಕಾರಿಗಳ ಭೇಟಿ
ಬೆಂಗಳೂರು, ನ. 2– ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯತಂತ್ರ ರೂಪಿಸುವ ಸಲುವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಪೊಲೀಸ್ ಉನ್ನತಾಧಿಕಾರಿಗಳು ಚೆನ್ನೈನಲ್ಲಿ ನಾಳೆ ಭೇಟಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ತಿಳಿಸಿದ್ದಾರೆ.
ತಮಿಳುನಾಡು ಸರ್ಕಾರದ ಜೊತೆ ಸೇರಿ ನಡೆಸಲಿರುವ ಜಂಟಿ ಕಾರ್ಯಾಚರಣೆಯ ಕಾರ್ಯವಿಧಾನದ ಕುರಿತು ರೂಪುರೇಷೆ ಸಿದ್ಧಪಡಿಸುವ ಸಲುವಾಗಿ ಅಧಿಕಾರಿಗಳು ಚೆನ್ನೈಗೆ ಹೊರಡಲಿದ್ದಾರೆ. ಡಿಜಿಪಿ ಟಿ. ಶ್ರೀನಿವಾಸಲು ನೇತೃತ್ವದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಕರ್ನಾಟಕ ತಂಡವು ತಮಿಳುನಾಡಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದೆ.
ಶರಣಾಗತನಾಗಲು ವೀರಪ್ಪನ್ ವಿಧಿಸಿರುವ ಹೊಸ ಷರತ್ತುಗಳನ್ನು ಕರ್ನಾಟಕ ಮತ್ತು ತಮಿಳುನಾಡು ಸಂಪೂರ್ಣವಾಗಿ ತಳ್ಳಿಹಾಕಿವೆ.