ನವದೆಹಲಿ, ಜ. 15 (ಯುಎನ್ಐ)– ಪಾಕಿಸ್ತಾನ ಕ್ರಿಕೆಟ್ ತಂಡದ ಭಾರತ ಪ್ರವಾಸವನ್ನು ಹಾಳುಮಾಡಲು ನಡೆಸುವ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಲಾಗುವುದು ಎಂದು ಪ್ರಧಾನಿ ಎ.ಬಿ.ವಾಜಪೇಯಿ ಅವರು ಹೇಳಿದ್ದಾರೆ.
ದೆಹಲಿಯ ಫಿರೋಜ್ಶಾ ಕೋಟ್ಲಾ ಮೈದಾನದ ಪಿಚ್ ಅನ್ನು ಅಗೆದು ಹಾಕಿದವರು ‘ಯಾರ ಪರವಾಗಿ ಆಡುತ್ತಿದ್ದಾರೆ?’ ಎಂದು ಕೇಳಿದ ಅವರು, ‘ಕತ್ತಲಲ್ಲಿ ಬಂದು ಅಂಗಣ ಅಗೆಯುವುದು ಧೈರ್ಯದ ಕೆಲಸವೇ’ ಎಂದು ತಮ್ಮ ಅಧಿಕೃತ ನಿವಾಸದಲ್ಲಿ ಕ್ರೀಡಾಳುಗಳ ಒಂದು ತಂಡವನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಶ್ನಿಸಿದರು.
‘ಕ್ರೀಡೆಯಲ್ಲಿ ರಾಜಕೀಯ ಬೇಡ’ ಎಂದ ಅವರು, ‘ಭಾರತ–ಪಾಕಿಸ್ತಾನದ ನಡುವಿನ ಕ್ರೀಡಾ ಬಾಂಧವ್ಯಕ್ಕೆ ಹುಳಿ ಹಿಂಡುವ ಯತ್ನ ಫಲಿಸದು’ ಎಂದರು.
ಶಬರಿಮಲೆ ದುರಂತ ನ್ಯಾಯಾಂಗ ತನಿಖೆ
ತಿರುವನಂತಪುರ, ಜ. 15 (ಪಿಟಿಐ, ಯುಎನ್ಐ)– ಶಬರಿಮಲೆ ಸಮೀಪದ ಪಂಬಾ ಬೆಟ್ಟದಲ್ಲಿ ಗುರುವಾರ ಭೂಕುಸಿತ ಮತ್ತು ಕಾಲ್ತುಳಿತಕ್ಕೆ ಸಿಕ್ಕಿ 52 ಯಾತ್ರಿಕರು ಮೃತಪಟ್ಟ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಕೇರಳ ಸರ್ಕಾರ ಇಂದು ಆದೇಶ ನೀಡಿದೆ.