ಜಾಫ್ನಾ: 62 ಉಗ್ರರು,20 ಸೈನಿಕರ ಹತ್ಯೆ ಕೊಲಂಬೊ, ಜುಲೈ 15 (ಪಿಟಿಐ, ಯುಎನ್ಐ)– ಜಾಫ್ನಾ ಪ್ರಾಂತ್ಯದಲ್ಲಿ ನಿನ್ನೆ ನಡೆದ ಪರಸ್ಪರ ದಾಳಿಯಲ್ಲಿ 62 ತಮಿಳು ಉಗ್ರಗಾಮಿಗಳು ಬಲಿಯಾಗಿದ್ದು, 20 ಸೈನಿಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಇಂದು ಹೇಳಿದರು.
ಸೇನೆಯ ದಾಳಿ ವಿಮಾನವನ್ನು ಉಗ್ರಗಾಮಿಗಳು ಶಂಕಿತ ಕ್ಷಿಪಣಿಯಿಂದ ಹೊಡೆದು ಉರುಳಿಸಿದಾಗ ಚಾಲಕನೂ ಸೇರಿದಂತೆ ಮೂವರು ಅಧಿಕಾರಿಗಳು ಸತ್ತವರಲ್ಲಿ ಸೇರಿದ್ದಾರೆ.
ರೂ. 250 ಕೋಟಿ ಕೇಂದ್ರನೆರವಿಗೆ ರಾಜ್ಯದ ಮನವಿ ಬೆಂಗಳೂರು, ಜುಲೈ 15– ರಾಜ್ಯದ ನೂರ ಹತ್ತು ತಾಲ್ಲೂಕುಗಳಲ್ಲಿ ಕಾಣಿಸಿಕೊಂಡಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ 250 ಕೋಟಿ ರೂಪಾಯಿ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿತು.
ಸಂಜೆ ನಡೆದ ಸರ್ವಪಕ್ಷ ಸಭೆಯಲ್ಲಿ, ರಾಜ್ಯವನ್ನು ಕಾಡುವ ಬರಗಾಲವೂ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಚರ್ಚಿಸಲು ಆಗಸ್ಟ್ ಒಂದರಿಂದ ವಿಧಾನಮಂಡಲದ ದೀರ್ಘಾವಧಿ ಅಧಿವೇಶನವನ್ನು ಕರೆಯಲು ಸರ್ಕಾರ ಒಪ್ಪಿದೆ ಎಂದು ಈ ಸಭೆಯಲ್ಲಿ ಪಾಲ್ಗೊಂಡಿದ್ದ ವಿರೋಧಿ ನಾಯಕರುಗಳು ತಿಳಿಸಿದ್ದಾರೆ.
ರಾಜನ್ ಪಿಳ್ಳೆ ಸಾವು: ಅಧಿಕಾರಿಗಳಿಗೆ ನೋಟಿಸ್ ಮದ್ರಾಸ್, ಜುಲೈ 15 (ಪಿಟಿಐ)– ಕುಖ್ಯಾತ ವಾಣಿಜ್ಯೋದ್ಯಮಿ ರಾಜನ್ ಪಿಳ್ಳೆ ಸಾವಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ದೆಹಲಿ ಆಡಳಿತ, ತಿಹಾರ್ ಜೈಲು ಹಾಗೂ ಉಪಾಧ್ಯಾಯ ಆಸ್ಪತ್ರೆಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.