ರಾಜೀವ್ ಹತ್ಯೆ: ವಿಶೇಷ ತನಿಖಾ ಸಂಸ್ಥೆ ರಚನೆಗೂ ಅತೃಪ್ತಿ
ಸರ್ಕಾರದ ಕ್ರಮ ಕೈಗೊಂಡ ವರದಿಗೆ ಕಾಂಗ್ರೆಸ್ ತಿರಸ್ಕಾರ
ನವದೆಹಲಿ, ಆಗಸ್ಟ್–3: ರಾಜೀವ್ ಗಾಂಧಿ ಹತ್ಯೆ ಸಂಚು ಕುರಿತಂತೆ ವಿಚಾರಣೆ ನಡೆಸಿದ ಜೈನ್ ಆಯೋಗದ ಅಂತಿಮ ವರದಿಗೆ ಕೇಂದ್ರ ಸರ್ಕಾರದ ಕ್ರಮ ಕೈಗೊಂಡ ವರದಿಯನ್ನು (ಎಟಿಆರ್) ‘ರಾಜಕೀಯ ಪ್ರೇರಿತ’ ಎಂದು ಬಣ್ಣಿಸಿರುವ ಕಾಂಗ್ರೆಸ್ ಪಕ್ಷ ಈ ವರದಿಯನ್ನು ತಿರಸ್ಕರಿದೆ.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಇಂದು ಇಲ್ಲಿ ಸಭೆ ಸೇರಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸುಮಾರು ಮೂರು ಗಂಟೆಗಳ ಕಾಲ ಜೈನ್ ಆಯೋಗದ ಅಂತಿಮ ವರದಿ ಮತ್ತು ಕ್ರಮ ಕೈಗೊಂಡ ವರದಿಯ ಬಗ್ಗೆ ಚರ್ಚೆ ನಡೆಸಿದ ನಂತರ ಎಟಿಆರ್ ಅನ್ನು ತಿರಸ್ಕರಿಸಲು ನಿರ್ಧರಿಸಿತು.
ಎಟಿಆರ್ ಅನ್ವಯ ಜೈನ್ ಆಯೋಗದಲ್ಲಿ ಗುಮಾನಿ ಪಟ್ಟಿರುವಂತೆ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಇನ್ನಷ್ಟು ತನಿಖೆ ನಡೆಸಲು ಎಲ್ಲ ತನಿಖಾ ವಿಭಾಗಗಳನ್ನೊಳಗೊಂಡ ವಿಶೇಷ ತನಿಖಾ ಸಂಸ್ಥೆ (ಎಂಡಿಎಂಎ)ಯನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಕ್ಕೂ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಎಕ್ಸ್ಪ್ರೆಸ್ ಹೆದ್ದಾರಿಗೆ ಕೂಡಿಬಂದ ಕಾಲ
ನವದೆಹಲಿ, ಆಗಸ್ಟ್ 2–ಜಮೀನು ವಶ ಕಾರ್ಯ ಮುಂದಿನ ತಿಂಗಳು ಆರಂಭವಾಗುವುದರೊಡನೆ ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಹಾಗೂ ಮಹತ್ವಾಕಾಂಕ್ಷೆಯ ಬೆಂಗಳೂರು– ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಕಾರ್ಯ ಕೊನೆಗೂ ಸಾಕಾರಗೊಳ್ಳುವ ಸಾಧ್ಯತೆಗಳು ಗೋಚರಿಸಿವೆ.
ಈ ಹೆದ್ದಾರಿ ಹಾದುಹೋಗುವ ಮಾರ್ಗದಲ್ಲಿ ಒಟ್ಟು ಐದು ಸ್ಥಳಗಳಲ್ಲಿ ಉಪನಗರ ಸಂಕೀರ್ಣಗಳು ಸೇರಿರುವ ಯೋಜನೆಯನ್ನು ದೇಶದ ಪ್ರಮುಖ ಖಾಸಗಿ ನಿರ್ಮಾಣ ಸಂಸ್ಥೆಯಾದ ಕಲ್ಯಾಣಿ ಕೈಗಾರಿಕಾ ಗುಂಪಿಗೆ ವಹಿಸಿಕೊಡಲಾಗಿದ್ದು, ಈ ಗುಂಪು ಇದಕ್ಕಾಗಿ ‘ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್’ (ಎನ್ಐಸಿಇ) ಎಂಬ ಜಂಟಿ ಅಂಗಸ್ಥೆಯನ್ನು ಸ್ಥಾಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.