ಬೆಂಗಳೂರು, ನ. 25– ಬೆಂಗಳೂರು ಮಹಾ ನಗರಪಾಲಿಕೆಯ 47 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಗಳಿಬ್ಬರು ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗಿದ್ದು ಈ ಎರಡೂ ಸ್ಥಾನಗಳಿಗೆ ಕ್ರಮವಾಗಿ ಜನತಾದಳದ ಪದ್ಮಾವತಿ ಗಂಗಾಧರಗೌಡ ಹಾಗೂ ವೆಂಟಕಲಕ್ಷ್ಮಿ ಚುನಾಯಿತರಾಗಿದ್ದಾರೆ.
ಈ ಹಿಂದೆ 1960ರಲ್ಲಿ ಬಿ. ಇಂದಿರಮ್ಮ ಅವರು ಮೇಯರ್ ಆಗಿದ್ದನ್ನು ಹೊರತು ಪಡಿಸಿದರೆ ಮತ್ತೊಬ್ಬ ಮಹಿಳೆ ಈ ಪ್ರತಿಷ್ಠಿತ ಸ್ಥಾನಕ್ಕೆ ಬಂದಿರಲಿಲ್ಲ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಜನೆ
ಬೆಂಗಳೂರು, ನ. 25– ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಮೂರು ವಿಭಾಗಗಳಾಗಿ ವಿಭಜಿಸುವ ಜತೆಗೆ ಬೆಂಗಳೂರು ಸಾರಿಗೆ ವ್ಯವಸ್ಥೆಯನ್ನು ಪ್ರತ್ಯೇಕಗೊಳಿಸಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಇಲ್ಲಿ ನಡೆದ ಉನ್ನತ ಮಟ್ಟದ ಸಭೆ ನಿರ್ಧಾರ ತೆಗೆದುಕೊಂಡಿದೆ.
’ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಹಾಗೂ ಕಾರ್ಯ ನಿರ್ವಹಣೆಯ ಬಗೆಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಸಂಸ್ಥೆ ನಡೆಯುತ್ತಿರುವ ಸ್ಥಿತಿ ನೋಡಿಯೂ ಹಾಗೇ ಬಿಟ್ಟರೆ ಮುಂದೆ ಕಷ್ಟವಾಗುತ್ತದೆ ಎಂಬುವುದು ಅನುಭವಕ್ಕೆ ಬಂದಿರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಯಿತು‘ ಎಂದು ಪಟೇಲ್ ಅವರು ಆ ನಂತರ ಸುದ್ದಿಗಾರರಿಗೆ ತಿಳಿಸಿದರು.