ನವದೆಹಲಿ, ಮೇ 20– ಸೋನಿಯಾ ಗಾಂಧಿ ವಿರುದ್ಧ ಬಂಡಾಯ ಎದ್ದಿರುವ ಮೂವರು ಹಿರಿಯ ನಾಯಕರಾದ ಶರದ್ ಪವಾರ್, ಪಿ.ಎ. ಸಂಗ್ಮಾ ಹಾಗೂ ತಾರಿಖ್ ಅನ್ವರ್ ಅವರನ್ನು ಇಂದು ರಾತ್ರಿ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಇಂದು ಸಂಜೆ 7.30ಕ್ಕೆ ಆರಂಭವಾದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿದೇಶಿ ಪ್ರಜೆ ಎಂಬ ಕಾರಣಕ್ಕೆ ಪ್ರಧಾನಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಬಾರದು ಎಂದು ಬಹಿರಂಗವಾಗಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷವೇ ಅಲ್ಲದೆ ದೇಶದಲ್ಲಿ ಕೋಲಾಹಲಕಾರಿ ಚರ್ಚೆಗೆ ಈ ಮೂವರು ನಾಯಕರು
ಕಾರಣರಾಗಿದ್ದರು.
ಬಿಜೆಪಿ ಪ್ರಣಾಳಿಕೆಯಲ್ಲಿ ವಿದೇಶಿ ಪ್ರಜೆ ವಿವಾದ: ಪ್ರಧಾನಿ
ನವದೆಹಲಿ, ಮೇ 20– ತನ್ನ ಮೊದಲ ನಿಲುವಿಗೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು (ಎನ್ಡಿಎ) ವಿದೇಶಿ ಮೂಲದ ಭಾರತದ ನಾಗರಿಕರು ಪ್ರಧಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಹುದ್ದೆಗಳನ್ನು
ಅಲಂಕರಿಸುವುದನ್ನು ನಿಷೇಧಿಸುವ ಸಲಹೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲು ಆಲೋಚಿಸುತ್ತಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದಾರೆ.
ಈ ಮುನ್ನ ವಾಜಪೇಯಿ ಅವರು, ಆ ರೀತಿಯ ವಿಚಾರವನ್ನು ನಿರಾಕರಿಸಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತದ ನಾಗರಿಕರಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಹಾಗೂ ಪ್ರಧಾನಿಯಾಗುವ ಹಕ್ಕು ಆಕೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು.