ಬೆಂಗಳೂರು, ಜುಲೈ 1– ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ಬೆಳಗಾವಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಧಾರವಾಡ ಜಿಲ್ಲೆಯ ಅರಭಾವಿಯಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸಲು ಸರ್ಕಾರ ಇಂದು ನಿರ್ಧರಿಸಿದೆ.
ಬಜೆಟ್ನಲ್ಲಿ ನೀಡಿದ್ದ ಭರವಸೆಯಂತೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಗೋಕಾಕ ತಾಲ್ಲೂಕಿನ ಅರಭಾವಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದುದಾಗಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
‘10 ಶಾಸಕರ ಉಚ್ಚಾಟನೆ ಶೀಘ್ರ’
ರಾಯಚೂರು, ಜುಲೈ 1– ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಕಾಂಗೈಗೆ ‘ದ್ರೋಹ ಬಗೆಯುತ್ತಿರುವ’ ಹತ್ತು ಜನ ಶಾಸಕರನ್ನು ಕಾಂಗೈನಿಂದ ಇಷ್ಟರಲ್ಲಿಯೇ ಉಚ್ಚಾಟಿಸಲಾಗುವುದು ಎಂದು ಕೆ.ಪಿ.ಸಿ.ಸಿ. (ಐ) ಅಧ್ಯಕ್ಷವಿ. ಕೃಷ್ಣರಾವ್ ಪ್ರಕಟಿಸಿದ್ದಾರೆ.
‘ಪ್ರಜಾವಾಣಿ’ಯೊಂದಿಗೆ ಮಾತನಾಡು ತ್ತಿದ್ದ ಅವರು, ಸಮರಕ್ಕೆ ಇಳಿದ ಬಂಗಾರಪ್ಪ ಅವರನ್ನು ಕಾಂಗೈನಿಂದ ಹೊರಹಾಕುವುದು ಅನಿವಾರ್ಯವಾಗಿತ್ತು ಎಂದು ಹಿನ್ನೆಲೆಯನ್ನು ವಿವರಿಸಿದರು.