ಕಲಬುರಗಿ, ಸೆ. 27– ‘ಬೆಂಕಿ ಬಿದ್ದಿದೆ ಮನೆಗೆ’ ಎಂದು ಕನ್ನಡದ ಸ್ಥಿತಿಯ ಬಗ್ಗೆ ಇಡೀ ರಾಜ್ಯದ ಗಮನ ಸೆಳೆದಿದ್ದ ಹಿರಿಯ ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ ಅವರು ಮಂಗಳೂರಿನಲ್ಲಿ ನಡೆಯಲಿರುವ 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ಇಂದು ಇಲ್ಲಿನ ಐವಾನ್ ಷಾಹಿ ಅತಿಥಿಗೃಹದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮಿತಿಯು ಮಧ್ಯಾಹ್ನ 1.50ಕ್ಕೆ ಈ ವಿಷಯವನ್ನು ಚರ್ಚೆಗೆತ್ತಿಕೊಂಡು ಕೇವಲ ಹತ್ತು ನಿಮಿಷಗಳಲ್ಲಿ ಕಯ್ಯಾರರನ್ನು ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡುವ ಬಗ್ಗೆ ಒಮ್ಮತಕ್ಕೆ ಬಂದಿತು.
ಅಧ್ಯಕ್ಷ ಸ್ಥಾನಕ್ಕೆ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನೊಂದಿಗೆ ಡಾ. ಕಮಲಾ ಹಂಪನಾ, ಡಾ. ಎಸ್.ವಿ. ಪರಮೇಶ್ವರ ಭಟ್, ಶಾಂತರಸ ಅವರ ಹೆಸರು ಪ್ರಸ್ತಾಪಕ್ಕೆ ಬಂದಿತಾದರೂ ಎಲ್ಲರೂ ಕಯ್ಯಾರರ ಆಯ್ಕೆಗೆ ಸಹಮತ ವ್ಯಕ್ತಪಡಿಸಿದರು.
ಕೇಂದ್ರಕ್ಕೆ ಮತ್ತೆ ಕಾಂಗ್ರೆಸ್ ಎಚ್ಚರಿಕೆ
ನವದೆಹಲಿ, ಸೆ. 27– ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ ಎಂದು ಸಂಯುಕ್ತರಂಗ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಹೊಸದಾಗಿ ರಚಿತವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ಇಲ್ಲಿ ಮೊದಲ ಬಾರಿಗೆ ಸಭೆ ಸೇರಿ, ಕೇಂದ್ರ ಸರ್ಕಾರದ ಅನೇಕ ವೈಫಲ್ಯಗಳನ್ನು ಚರ್ಚಿಸಿತು. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರದ ಪ್ರಯೋಗ ವಿಫಲವಾಗಿದೆ ಎಂದು ಸಭೆ ಅಂಗೀಕರಿಸಿದ ನಿರ್ಣಯದಲ್ಲಿ ಹೇಳಲಾಗಿದೆ.