ನವದೆಹಲಿ, ಏ. 14 (ಪಿಟಿಐ)– ದೇವೇಗೌಡರು ಪದತ್ಯಾಗ ಮಾಡಲು ನಿರ್ಧರಿಸಿದ ಬಳಿಕ ಸಂಯುಕ್ತರಂಗದಲ್ಲಿ ಈಗ ನಾಯಕನ ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭವಾಗಿದೆ. ಹೊಸ ಸರ್ಕರದ ನೇತೃತ್ವವಹಿಸಲು ಜಿ.ಕೆ. ಮೂಪನಾರ್, ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಹೆಸರು ಪ್ರಮುಖವಾಗಿ ಚರ್ಚೆಯಲ್ಲಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಾವು ಪ್ರಧಾನಿ ಪದಕ್ಕೆ ಸ್ಪರ್ಧಿಯಲ್ಲ ಎಂದು ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಗೌಡರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಜನತಾದಳದ ಐ.ಕೆ. ಗುಜ್ರಾಲ್ ಅವರ ಹೆಸರೂ ಪ್ರಧಾನಿಯ ಸ್ಥಾನಕ್ಕೆ ಕೇಳಿಬರುತ್ತಿದೆ.
ಚುನಾವಣೆ ಎದುರಿಸಲು ರಾಜ್ಯ ಸಿದ್ಧ: ಪಟೇಲ್
ನವದೆಹಲಿ, ಏ. 14– ಮತ್ತೊಮ್ಮೆ ಲೋಕಸಭೆ ಚುನಾವಣೆ ನಡೆಯುವ ಪ್ರಮೇಯಕ್ಕೆ ಕರ್ನಾಟಕ ಸಿದ್ಧವಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ಪ್ರಕಟಿಸಿದರು.
‘ಸಂಯುಕ್ತ ರಂಗವು ಮತ್ತೆ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಸರ್ಕಾರ ರಚಿಸಿ ತೇಪೆ ವ್ಯವಸ್ಥೆಯನ್ನು ತರುವ ಬದಲು ಒಂದು ಸುಭದ್ರ ಸರ್ಕಾರಕ್ಕಾಗಿ ಲೋಕಸಭೆಗೆ ಮಧ್ಯಂತರ ಲೋಕಸಭೆ ಚುನಾವಣೆ ನಡೆಯುವುದು ಅನಿವಾರ್ಯ ಇದಕ್ಕೆ ಕರ್ನಾಟಕ ಸಿದ್ಧವಾಗಿದೆ’ ಎಂದರು.