ಶ್ರೀನಗರ, ಮಾರ್ಚ್ 25 (ಯುಎನ್ಐ, ಪಿಟಿಐ)– ಹಜರತ್ಬಾಲ್ ಮಸೀದಿಯನ್ನು ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗದ (ಷಬ್ಬೀರ್ ಸಿದ್ದೀಖ್ ಗುಂಪು) ಹಿಡಿತದಿಂದ ತಪ್ಪಿಸಲು ಬೆಳಿಗ್ಗೆಯಿಂದ ನಡೆಸಿದ ಯತ್ನ ವಿಫಲವಾಗಿದೆ.
ಮಸೀದಿಯಿಂದ ಹೊರಬರುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಭಯೋತ್ಪಾದಕರು ತಿರಸ್ಕರಿಸಿದ್ದಾರೆ. ಮಸೀದಿಯ ಆವರಣದಲ್ಲಿ ವಿಧಿಸಲಾಗಿರುವ ಅನಿರ್ದಿಷ್ಟ ಅವಧಿಯ ಕರ್ಫ್ಯೂ ಮುಂದುವರಿದಿದೆ.
ಈ ನಡುವೆ, ಮಸೀದಿ ಆವರಣದಲ್ಲಿ ನಿನ್ನೆ ನಡೆದ ಕಾಳಗದಲ್ಲಿ ಭದ್ರತಾ ಪಡೆಯ 16 ಮಂದಿ ಮತ್ತು 14 ಮಂದಿ ಭಯೋತ್ಪಾದಕರು ಸತ್ತಿದ್ದಾರೆ ಎಂದು ಜೆಕೆಎಲ್ಎಫ್ ವಕ್ತಾರರು ಹೇಳಿದ್ದಾರೆ. ಈ ಹೇಳಿಕೆಯನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಕಾಳಗದಲ್ಲಿ ಮೃತರಾದವರ ದೇಹಗಳನ್ನು ತೆಗೆಯಲು ಉಗ್ರಗಾಮಿಗಳು ಅವಕಾಶ ನೀಡಲಿಲ್ಲ.
ಬಿಜೆಪಿ ಮೊದಲ ಪಟ್ಟಿಯಲ್ಲಿ 272 ಮಂದಿಗೆ ಟಿಕೆಟ್
ನವದೆಹಲಿ, ಮಾರ್ಚ್ 25– ಲೋಕಸಭೆಯ ಚುನಾವಣೆಗೆ 475 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಭಾರತೀಯ ಜನತಾ ಪಕ್ಷವು ಕರ್ನಾಟಕದ 22 ಹಾಗೂ 17 ರಾಜ್ಯಗಳ 272 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಇಲ್ಲಿ ಬಿಡುಗಡೆ ಮಾಡಿದೆ.
ಪ್ರಧಾನಿ ಪಟ್ಟಕ್ಕೆ ಹೆಸರಿಸಲಾಗಿರುವ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರೀಯ ಕಾರ್ಯದರ್ಶಿ ಅನಂತ ಕುಮಾರ್, ಲೋಕಸಭೆಯ ಉಪಸಭಾಪತಿ ಎಸ್.ಮಲ್ಲಿಕಾರ್ಜುನಯ್ಯ, ಪಕ್ಷದ ಮಾಜಿ ಅಧ್ಯಕ್ಷ ಡಾ. ಮುರಳಿ ಮನೋಹರ ಜೋಷಿ, ರಾಜಮಾತಾ ವಿಜಯರಾಜೇ ಸಿಂಧಿಯಾ, ಸಿಕಂದರ್ ಬಖ್ತ್ ಅವರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ.