ಬೆಂಗಳೂರು, ಜ. 3– ವಿಧಾನ ಸಭೆಯಲ್ಲಿ ಇಂದು ನಡೆದ ನಾಟಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸೇರಿದಂತೆ ಎಂಟು ಮಂದಿ ಭಿನ್ನಮತೀಯ ಸಚಿವರು ರಾಜ್ಯಪಾಲರಿಗೇ ನೇರವಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.
ವಿಧಾನಸಭೆಯ ಕಲಾಪಗಳ ಮಧ್ಯೆ ಸದನ ಬಿಟ್ಟು ಹೊರ ನಡೆದ ಕೃಷ್ಣ ಅವರನ್ನು ಭಿನ್ನ ಸಚಿವರು ಹಿಂಬಾಲಿಸಿದರು. ಅವರ ಮನೆಯಲ್ಲಿ ತುಸು ಹೊತ್ತು ಸಭೆ ನಡೆಸಿ ನಂತರ ಒಟ್ಟಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಎಲ್ಲರೂ ಪ್ರತ್ಯೇಕವಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.
ಸದನ ವಿಸರ್ಜನೆಗೆ ಪ್ರತಿಪಕ್ಷ ಆಗ್ರಹ
ಬೆಂಗಳೂರು, ಜ. 3– ಬಹುಮತ ಕಳೆದು ಕೊಂಡಿರುವ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರವನ್ನು ವಜಾ ಮಾಡಿ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ವಿರೋಧ ಪಕ್ಷಗಳು ಇಂದು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರನ್ನು ಒತ್ತಾಯಿಸಿದವು.
ಲಂಕೇಶ್ಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ
ಬೆಂಗಳೂರು, ಜ. 3– ಕನ್ನಡದ ಪ್ರಖ್ಯಾತ ಸೃಜನಶೀಲ ಬರಹಗಾರ ಪಿ. ಲಂಕೇಶ್ ಅವರ ‘ಕಲ್ಲು ಕರಗುವ ಸಮಯ’ ಕಥಾ ಸಂಕಲನಕ್ಕೆ 1993ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಪ್ರೊ. ಕೀರ್ತಿನಾಥ ಕುರ್ತಕೋಟಿ ಅವರು ಅನುವಾದಿಸಿದ ‘ಮರಾಠಿ ಸಂಸ್ಕೃತಿ– ಕೆಲವು ಸಮಸ್ಯೆಗಳು’ ಕೃತಿ ಅನುವಾದ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ ಗಳಿಸಿದೆ. ವಿವಿಧ ಭಾಷೆಗಳ 21 ಕೃತಿಗಳು ಈ ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದು 17 ಅನುವಾದ ಕೃತಿಗಳೂ ಪ್ರಶಸ್ತಿಗೆ ಆಯ್ಕೆಯಾಗಿವೆ.