ನವದೆಹಲಿ, ಡಿ. 30 (ಪಿಟಿಐ, ಯುಎನ್ಐ)– ಷೇರು ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಲ್ಲಿಸಿದ ವರದಿಯನ್ನು ಸರ್ಕಾರ ವಿವರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು. ವರದಿಯ ಮೇಲೆ ಎರಡು ದಿನ ನಡೆದ ಚರ್ಚೆಗೆ ಹಣಕಾಸು ಸಚಿವ ಡಾ. ಮನಮೋಹನಸಿಂಗ್ ಅವರು ಉತ್ತರಿಸಿದ ಬಳಿಕ ಪ್ರಧಾನಿ ಮಾತನಾಡಿ, ಸಿಂಗ್ ನೀಡಿದ ಉತ್ತರವನ್ನು ತಾವು ಪೂರ್ಣ ಸಮರ್ಥಿಸುವುದಾಗಿ ಸ್ಪಷ್ಟಪಡಿಸಿದರು.