ರಾಜಿ ಯತ್ನ ಬಿಟ್ಟು ಮುಷ್ಕರಕ್ಕೇ ಪಟ್ಟು ಹಿಡಿದರೆ ಬಿಗಿ ಕ್ರಮ
ನವದೆಹಲಿ, ಏ. 25– ತೃಪ್ತಿಕರ ರಾಜಿ ಇತ್ಯರ್ಥದ ಮೂಲಕ ರೈಲು ಮುಷ್ಕರ ತಪ್ಪಿಸಲು ತಾವು ಆಸಕ್ತಿ ವಹಿಸಿರುವುದಾಗಿ ರೈಲ್ವೆ ಸಚಿವ ಎಲ್.ಎನ್. ಮಿಶ್ರಾ ಅವರು ಇಂದು ಲೋಕಸಭೆಯಲ್ಲಿ ಮತ್ತೆ ಮತ್ತೆ ಆಶ್ವಾಸನೆ ನೀಡಿದರು.
ಆದರೆ, ಮುಷ್ಕರ ಹೂಡಿಯೇ ತೀರುವುದಾಗಿ ಪಟ್ಟುಹಿಡಿದಲ್ಲಿ ಅಗತ್ಯ ವಸ್ತುಗಳ ಸರಬರಾಜಿಗಾಗಿ ಸೂಕ್ತ ಕಂಡ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಉದ್ದೇಶಿತ ರೈಲು ಮುಷ್ಕರ ಕುರಿತು ಮಾರ್ಕ್ಸಿಸ್ಟ್ ನಾಯಕ ಎ.ಕೆ. ಗೋಪಾಲನ್ ಮತ್ತು ಇತರ ನಾಲ್ವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡುತ್ತಾ, ಸಂಧಾನ ಯತ್ನ ನಡೆಯುತ್ತಿರುವಾಗಲೇ ಮುಷ್ಕರಕ್ಕೆ ನೋಟಿಸ್ ಜಾರಿಗೊಳಿಸುವುದು ಸರಿಯಾದ ಕ್ರಮವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೈಲ್ವೆ ಉಪಸಚಿವ ಮಹಮ್ಮದ್ ಷಫೀ ಖುರೇಷಿ ಮತ್ತು ಕಾರ್ಮಿಕರ ನಡುವೆ ಏ. 27ರಂದು ನಡೆಯುವ ಸಂಧಾನದಲ್ಲಿ ಉಭಯ ಬಣಗಳೂ ಪ್ರತಿಪಕ್ಷ ನೀಡುವ ಸಹಕಾರದ ಬಗ್ಗೆ ಗಮನ ಕೇಂದ್ರೀಕರಿಸಿವೆ.