ಬೆಂಗಳೂರು, ಮೇ 12– ರಾಜ್ಯ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಏಳು ಮತದಾರ ಕ್ಷೇತ್ರಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಮತ್ತು ಸಂಸ್ಥಾ ಕಾಂಗ್ರೆಸ್ 2 ಸ್ಥಾನಗಳನ್ನು ಗಳಿಸಿವೆ.
ಬೆಂಗಳೂರು ಮತ್ತು ಧಾರವಾಡ ಜಿಲ್ಲೆಯ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷವು ಸಂಸ್ಥಾ ಕಾಂಗ್ರೆಸ್ನಿಂದ ಗಳಿಸಿಕೊಂಡಿದೆ. ಕೋಲಾರ, ಬೀದರ್ ಮತ್ತು ಚಿತ್ರದುರ್ಗದ ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆ ಸ್ಥಾನಗಳನ್ನು ಸಂಸ್ಥಾ ಕಾಂಗ್ರೆಸ್ ಉಳಿಸಿಕೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಜೆ. ಶ್ರೀನಿವಾಸ ರೆಡ್ಡಿ (ಬೆಂಗಳೂರು ಜಿಲ್ಲೆ), ಚನ್ನಯ್ಯ ಒಡೆಯರ್ (ಚಿತ್ರದುರ್ಗ ಜಿಲ್ಲೆ), ಪಾಲಾಕ್ಷಿ ಟಿ. ದೇಸಾಯಿ (ಧಾರವಾಡ ಜಿಲ್ಲೆ), ಎನ್.ಎಂ. ಖೇಣಿ (ಬೀದರ್ ಜಿಲ್ಲೆ) ಮತ್ತು ಎಂ.ಸಿ. ಆಂಜನೇಯ ರೆಡ್ಡಿ (ಕೋಲಾರ ಜಿಲ್ಲೆ) ಆಯ್ಕೆಯಾಗಿದ್ದಾರೆ.
ಸಂಸ್ಥಾ ಕಾಂಗ್ರೆಸ್ನ ವಿ.ಎಂ. ಕಟ್ಟಿ (ಬೆಳಗಾವಿ ಜಿಲ್ಲೆ) ಮತ್ತು ಆರ್.ಎಸ್. ಭಾಗವತ್ (ಉತ್ತರಕನ್ನಡ ಜಿಲ್ಲೆ) ವಿಜಯಿಗಳಾಗಿದ್ದಾರೆ.