ವಿಶ್ವ ರಾಷ್ಟ್ರಸಂಸ್ಥೆ, ಅ. 27– ‘ನನ್ನ ಸ್ತ್ರೀತ್ವ ಯಾವೊಂದು ಕೆಲಸ ಮಾಡಲೂ ಅಡ್ಡಿ ಬಂದಿಲ್ಲ ಅಥವಾ ಯಾವ ಕೆಲಸ ಮಾಡುವಂತೆಯೂ ಬಲಾತ್ಕರಿಸಿಲ್ಲ’ ಎಂದು ಭಾರತದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ನಿನ್ನೆ ಪ್ರಸಾರವಾದ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
‘ಅಮೆರಿಕದಲ್ಲಿ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಅಧಿಕಾರ ವಹಿಸಿಕೊಳ್ಳಲು ಇರುವ ತೊಂದರೆಯೆಂದರೆ, ಪುರುಷರು ಹಾಗೂ ಮಹಿಳೆಯರು ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಹೊಂದಿರುವುದು’ ಎಂದು ತಾವು ಭಾವಿಸುವುದಾಗಿ ಅವರು ತಿಳಿಸಿದ್ದಾರೆ.
ಕಾವೇರಿ ಜಲ ವಿವಾದ ಮಾತುಕತೆ ವಿಫಲ
ಮದ್ರಾಸ್, ಅ. 27– ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ಮೈಸೂರು, ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವೆ ಇಂದು ನಡೆದ ಮಾತುಕತೆಗಳು ವಿಫಲಗೊಂಡವು.
ತಮಿಳುನಾಡು, ಮೈಸೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇರಳದ ಲೋಕೋಪಯೋಗಿ ಸಚಿವರ ನಡುವೆ ನಡೆದ ಮಾತುಕತೆಯ ನಂತರ ಕೇರಳ ಸಚಿವ ಟಿ.ಕೆ.ದಿವಾಕರನ್ ಅವರು ‘ಒಪ್ಪಂದವಾಗಲಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.