ಬೆಳಗಾವಿ ಕೆ.ಎಲ್.ಇ. ಸೊಸೈಟಿ ಹಾಸ್ಟೆಲ್ ಮೇಲೆ ಮರಾಠಿಗರ ದಾಳಿ: ಅಶ್ರುವಾಯು ಪ್ರಯೋಗ ಬೆಳಗಾವಿ, ಡಿ. 20:ಗಡಿ ವಿವಾದದ ಸಂಬಂಧದಲ್ಲಿ ಮಹಾರಾಷ್ಟ್ರದ ಪರ ಕಲ್ಲು ತೂರಾಟದಲ್ಲಿ ತೊಡಗಿದ್ದ ಒಂದು ಗುಂಪನ್ನು ಚದುರಿಸಲು ಇಂದು ಇಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಘು ಬೆತ್ತದ ಪ್ರಹಾರ ಮಾಡಿದರು.
ಗಲಭೆ ಹರಡುತ್ತಿದ್ದಂತೆಯೇ ಪೊಲೀಸ್ ಶಾಸನದ 35ನೇ ವಿಧಿ ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೆ ತರಲಾಯಿತು.
ನಗರದ ಎರಡು ಕಡೆಗಳಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣಗಳಲ್ಲಿ ಒಬ್ಬ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಮೂವರು ಕಾನ್ಸ್ಟೆಬಲ್ಗಳು ಮತ್ತು ಒಬ್ಬ ಖಾಸಗಿ ವ್ಯಕ್ತಿಗೆ ಗಾಯಗಳಾದವೆಂದು ವರದಿಯಾಗಿದೆ.
ಮಹಾರಾಷ್ಟ್ರದ ಪರ ಚಳವಳಿಗಾರರ ಸುಮಾರು 1,000 ಜನರ ಒಂದು ಗುಂಪು ಕರ್ನಾಟಕ ಲಿಬರಲ್ ಎಜುಕೇಷನ್ ಸೊಸೈಟಿಯ ಹಾಸ್ಟೆಲ್ಗಳಿಗೆ ಮುತ್ತಿಗೆ ಹಾಕಿ, ಎನ್.ಸಿ.ಸಿ ಸ್ಟೋರೇಜ್ ಷೆಡ್ ಒಂದಕ್ಕೆ ಬೆಂಕಿ ಹಚ್ಚಿತು.
ನಗರದಲ್ಲಿ ಶೇ 60ಕ್ಕೂ ಹೆಚ್ಚು ಮತದಾನ: ಬಹುಪಾಲು ಶಾಂತ ಬೆಂಗಳೂರು, ಡಿ. 20:ನಗರ ಕಾರ್ಪೊರೇಷನ್ನಿನ 62 ಸ್ಥಾನಗಳಿಗೆ ಇಂದು ಮತದಾನ ನಡೆದು ಶೇ 60ಕ್ಕೆ ಸ್ವಲ್ಪ ಹೆಚ್ಚು ಮಂದಿ ಮತ ನೀಡಿದ್ದಾರೆಂದು ಅಂದಾಜು ಮಾಡಲಾಗಿದೆ.
ಈಚೆಗೆ ರೈಲ್ವೆ ಸತ್ಯಾಗ್ರಹದಲ್ಲಿ ದುರಂತಕ್ಕೀಡಾದ ಶ್ರೀ ಗೋವಿಂದರಾಜು ಅವರು ಸ್ಪರ್ಧಿಸಿದ್ದ ರಾಮಚಂದ್ರಾಪುರ ಕ್ಷೇತ್ರದಲ್ಲಿ ಚುನಾವಣೆ ಮುಂದಕ್ಕೆ ಹೋಗಿದೆ.
ಯಶವಂತಪುರ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮತಪೆಟ್ಟಿಗೆಗಳನ್ನು ನಾಶ ಮಾಡಿದ ಎರಡು ಘಟನೆಗಳನ್ನು ಬಿಟ್ಟರೆ ಚುನಾವಣೆ ಬಹುಮಟ್ಟಿಗೆ ಶಾಂತಿಯುತವಾಗಿ ನಡೆಯಿತು.