ಸರ್ಕಾರಿ ಸಾಲ ಪತ್ರಗಳಲ್ಲಿ ಬಂಡವಾಳ: ಸಾಮಾನ್ಯ ವಿಮಾ ಸಂಸ್ಥೆಗಳಿಗೆ ಕೇಂದ್ರದ ಸೂಚನೆ
ನವದೆಹಲಿ, ಸೆ. 5– ಸರ್ಕಾರಿ ಸಾಲಪತ್ರ ಮುಂತಾದ ಅಂಗೀಕೃತ ವರ್ಗಗಳಲ್ಲಿ ಬಂಡವಾಳವನ್ನು ತೊಡಗಿಸಬೇಕು ಎಂದು ಸಾಮಾನ್ಯ ವಿಮಾ ಸಂಸ್ಥೆಗಳ ಬಂಡವಾಳ ಹೂಡಿಕೆ ಬಗ್ಗೆ ಸರ್ಕಾರ ರೂಪಿಸಿರುವ ನೀತಿ ನಿರ್ದೇಶನಗಳಲ್ಲಿ ಒತ್ತಿ ಹೇಳಲಾಗಿದೆ.
ಈ ನಿರ್ದೇಶನಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಸಾಮಾನ್ಯ ವಿಮಾ ಸಂಸ್ಥೆಗಳಲ್ಲಿ ಬಂಡವಾಳವಾಗಿ ತೊಡಗಿಸಬಲ್ಲ ಸಂಪನ್ಮೂಲಗಳು ಪ್ರತಿವರ್ಷ 15 ಕೋಟಿ ರೂ.ಗಳಷ್ಟು ಹೆಚ್ಚುವುದೆಂದು ಅಂದಾಜು ಮಾಡಲಾಗಿದೆ.
ಭಾರತ– ರಷ್ಯಾ ಒಪ್ಪಂದ: ಕಟುಟೀಕೆ
ನವದೆಹಲಿ, ಸೆ. 5– ಸಂಸತ್ನ ವಿರೋಧ ಪಕ್ಷಗಳ ಸದಸ್ಯರು, ಇಂದು ಇಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿಯೊಂದರಲ್ಲಿ ಭಾರತ– ರಷ್ಯಾ ಮೈತ್ರಿ ಒಪ್ಪಂದವನ್ನು ಒಂದೇ ಸಮನೆ ತೀವ್ರ ವಾಗಿ ಟೀಕಿಸಿದರು.
ಸ್ವತಂತ್ರ ಪಕ್ಷದ ನಾಯಕರುಗಳಾದ ಶ್ರೀ ಮೀನುಮಸಾನಿ, ಶ್ರೀ ಪೀಲೂಮೋದಿ ಮತ್ತು ಜನಸಂಘದ ನಾಯಕ ಶ್ರೀ ಬಲರಾಜ ಮಧೋಕ್ ಅವರು ಮಾತನಾಡುತ್ತ, ‘ಈ ಒಪ್ಪಂದವು ರಾಷ್ಟ್ರವನ್ನು ಪ್ರತ್ಯೇಕಗೊಳಿಸಿ, ರಷ್ಯಾದ ಬಾಲುಬಡುಕ ರಾಷ್ಟ್ರವನ್ನಾಗಿ ಮಾಡುತ್ತದೆ’ ಎಂದರು.