ಹಿಂದಿನ ಸರ್ಕಾರ ನಿರ್ಧಾರ ಮಾರ್ಪಾಡಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯರ ಖಂಡನೆ
ಬೆಂಗಳೂರು, ಸೆ.9– ಇಂದು ಇಲ್ಲಿ ನಡೆದ ವಿಧಾನ ಪರಿಷತ್ತಿನ ಸದಸ್ಯರ ಉದ್ರಿಕ್ತ ಸಭೆ ಅಧಿಕಾರಿಗಳಿಗೆ ವಸತಿ ನಿರ್ಮಿಸುವ ಪ್ರಯತ್ನವನ್ನು ಕೈಬಿಟ್ಟು ಹಿಂದಿನ ಸರ್ಕಾರದ ತೀರ್ಮಾನದಂತೆ ಆ ಸ್ಥಳದಲ್ಲಿ ಶಾಸಕಾಂಗ ಭವನವನ್ನು ಕೂಡಲೇ ನಿರ್ಮಿಸಬೇಕೆಂದು ಆಗ್ರಹಪಡಿಸಿತು.
ಸಭಾಪತಿ ಎಸ್.ಪಿ. ರಾಜಣ್ಣ ಅವರು ಕರೆದಿದ್ದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಸದಸ್ಯರು ರಾಷ್ಟ್ರಪತಿ ಆಡಳಿತದ ಸರ್ಕಾರ ಹಿಂದಿನ ಸರ್ಕಾರದ ನಿರ್ಧಾರವನ್ನು ಬದಲಾಯಿಸಿರುವುದನ್ನು ಉಗ್ರವಾಗಿ ಟೀಕಿಸಿದರು.
ಕರ್ನಾಟಕ ಎಕ್ಸ್ಪ್ರೆಸ್
ಹುಬ್ಬಳ್ಳಿ. ಸೆ.9– ಮೀರಜ್– ಬೆಂಗಳೂರು ನಡುವೆ ಸಂಚರಿಸುವ ಡೆಕ್ಕನ್ ಎಕ್ಸ್ಪ್ರೆಸ್ ರೈಲುಗಾಡಿಗೆ ಅಕ್ಟೋಬರ್ 1 ರಿಂದ ‘ಕರ್ನಾಟಕ ಎಕ್ಸ್ಪ್ರೆಸ್’ ಎಂದು ಪುನರ್ ನಾಮಕರಣ ಮಾಡಲಾಗುವುದೆಂದು ಕೇಂದ್ರದ ರೈಲ್ವೆ ಸಚಿವ ಕೆ. ಹನುಮಂತಯ್ಯ ಅವರು ಇಂದು ಇಲ್ಲಿ ಪ್ರಕಟಿಸಿದರು.
ಬೆಳಿಗ್ಗೆ ಹನುಮಂತಯ್ಯ ಅವರು ಹುಬ್ಬಳ್ಳಿ– ಧಾರವಾಡ ಕೊಳಚೆ ಪ್ರದೇಶ ನಿವಾಸಿಗಳ ಸಮ್ಮೇಳನವನ್ನು ಉದ್ಘಾಟಿಸಿದಾಗ ಎಂಪಿಸಿಸಿ (ಆಡಳಿತ) ಪ್ರಧಾನ ಕಾರ್ಯದರ್ಶಿ ಕೆ.ಎಚ್. ಪಾಟೀಲ್ ಅವರು ಮಾಡಿದ ಒತ್ತಾಯಪೂರ್ವಕ ಮನವಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಹೇಳಲಾಗಿದೆ.