ಬೆಂಗಳೂರು, ಮಾರ್ಚ್ 25– ‘ಹೆಜ್ಜೆ ಹೆಜ್ಜೆಗೆ ತೊಡಕು. ಅವರನ್ನು ಅಲ್ಲಿಗೆ ವರ್ಗ ಮಾಡಿ, ಇವರನ್ನು ಹಿಡಿಯಿರಿ, ಅವರನ್ನು ಬಿಡಿ ಎಂದು ಪ್ರಭಾವ ಬೀರುವುದು. ಪುಢಾರಿಗಳು ಮತ್ತು ರಾಜಕೀಯ ಮುಖಂಡರಿಂದಲೇ ಗೊಂದಲಮಯ ವಾತಾವರಣ ಸೃಷ್ಟಿ’– ಪೊಲೀಸರು ಕಾನೂನು ಮತ್ತು ಶಾಂತಿ ಪಾಲನೆ ಮಾಡಲು ಅಡ್ಡಿಗಳು ಬರುತ್ತಿರುವ ಬಗ್ಗೆ ಮುಖ್ಯಮಂತ್ರಿ ಡಿ.ದೇವರಾಜ ಅರಸು ಇಂದು ಇಲ್ಲಿ ವಿಷಾದಿಸಿ, ‘ದಯವಿಟ್ಟು ಪೊಲೀಸರ ಕಾರ್ಯದಲ್ಲಿ ಮಧ್ಯಪ್ರವೇಶಿಸಿ ಅವರ ಹೆಸರಿಗೆ ಕಳಂಕ ತರಬೇಡಿ’ ಎಂದು ಎಲ್ಲ ವರ್ಗದ ಮುಖಂಡರಿಗೆ ಮನವಿ ಮಾಡಿದರು.