ರಾಜ್ಯಪಾಲರ ನೇಮಕ ರೀತಿ ಬದಲಾವಣೆ, ಇಲ್ಲವೇ ಹುದ್ದೆ ರದ್ದಿಗೆ ವಿವಿಧ ನಾಯಕರ ಸಲಹೆ
ನವದೆಹಲಿ, ನ. 29– ರಾಜ್ಯಪಾಲರ ನೇಮಕದ ಪದ್ಧತಿ ವಿವಿಧ ವಿರೋಧ ಪಕ್ಷಗಳ ನಾಯಕರ ದೃಷ್ಟಿಯಲ್ಲಿ ಅತೃಪ್ತಿಕರವೆನಿಸಿದೆ. ಸದ್ಯದ ಪದ್ಧತಿ ಪ್ರಕಾರ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ತಾನು ಇಚ್ಛಿಸಿದವರಿಗೆ ಅನುಕೂಲ ಮಾಡಿಕೊಡಬಹುದೆಂದು ಅವರ ಅಭಿಪ್ರಾಯ.
ನಿಷ್ಪಕ್ಷಪಾತ ಸಲಹೆಗಾರರ ಮಂಡಳಿಯ ನೆರವಿನಿಂದ ರಾಷ್ಟ್ರಪತಿಯು ರಾಜ್ಯಪಾಲರನ್ನು ನೇಮಿಸಬೇಕೆಂದು ಲೋಕಸಭೆಯಲ್ಲಿ ಸಂಸ್ಥಾ ಕಾಂಗ್ರೆಸ್ ನಾಯಕರಾಗಿರುವ ಡಾ. ರಾಮಸುಭಗ ಸಿಂಗ್ ಹೇಳಿದ್ದಾರೆ.
ಮಹಾಜನ್ ವರದಿ ಬಿಟ್ಟರೆ ದುಷ್ಪರಿಣಾಮ
ನವದೆಹಲಿ, ನ. 29– ಮಹಾರಾಷ್ಟ್ರ– ಮೈಸೂರು ಗಡಿ ವಿವಾದ ಕುರಿತು ಮಹಾಜನ್ ವರದಿಯಿಂದ ವಿಮುಖವಾದರೆ ತಮ್ಮ ರಾಜ್ಯದಲ್ಲಿ ‘ತೀವ್ರ ಪರಿಣಾಮ’ ಉಂಟಾಗುವುದೆಂದು ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಡನೆ ತಾವು ನಿನ್ನೆ ಮಾತುಕತೆ ನಡೆಸಿದಾಗ ಈ ಎಚ್ಚರಿಕೆ ನೀಡಿದುದಾಗಿ ರಾಜ್ಯದ ವಿರೋಧ ಪಕ್ಷಗಳ ನಾಯಕರ ನಿಯೋಗವೊಂದಕ್ಕೆ ಶ್ರೀ ಪಾಟೀಲ್ ತಿಳಿಸಿದರು.