ಬೆಂಗಳೂರು, ಏ. 30– ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಸಲು ಒಂದೊಂದು ವಿಭಾಗವನ್ನಾಗಿ ಅಭಿವೃದ್ಧಿ ಮಾಡುವ ಕಾರ್ಯಕ್ರಮ ರೂಪಿಸಲಾಗುವುದೆಂದು ಕಾರ್ಮಿಕ ಹಾಗೂ ಪ್ರವಾಸೋದ್ಯಮ ಸಚಿವ ಎಸ್.ಎಂ. ಯಾಹ್ಯಾ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಗೋಕರ್ಣವನ್ನು ಪ್ರವಾಸಿ ಕೇಂದ್ರ ಮಾಡಲಾಗುವುದೆಂದೂ ಮರವಂತೆ ಕಡಲ ದಂಡೆಯನ್ನು ಈ ವರ್ಷವೇ ಅಭಿವೃದ್ಧಿ ಮಾಡಲಾಗುವುದೆಂದೂ ವಿವರಿಸಿದರು.
ಕೈದಿ ತಲೆ, ಗಡ್ಡ ಬೋಳಿಸಿದ ಜೈಲರ್ ಸಸ್ಪೆಂಡ್
ಬೆಂಗಳೂರು, ಏ. 30– ಕಾರವಾರದ ಸಬ್ ಜೈಲಿನಲ್ಲಿ ವಿಚಾರಣೆಗೆ ಒಳಗಾಗಿರುವ ಕೈದಿ ಒಬ್ಬನ ತಲೆ ಮತ್ತು ಗಡ್ಡವನ್ನು ಬೋಳಿಸಿದ ಜೈಲರ್ ಹಾಗೂ ಹೆಡ್ವಾರ್ಡರ್ ಅವರನ್ನು
ಸಸ್ಪೆಂಡ್ ಮಾಡಲಾಗಿದೆ ಎಂದು
ಲೋಕೋಪಯೋಗಿ ಸಚಿವ ಎಚ್.ಎಂ. ಚೆನ್ನಬಸಪ್ಪ ವಿಧಾನಸಭೆಯಲ್ಲಿ ತಿಳಿಸಿದರು.
ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ತನಿಖಾ ಅಧಿಕಾರಿಯನ್ನು ನೇಮಿಸಲಾಗಿದ್ದು, ತನಿಖೆ ಆರಂಭವಾಗಿದೆ ಎಂದರು.