ಅದೇ ಮಾಮೂಲಿ: ವಸೂಲಿ ರೀತಿ ಬೇರೆ
ಬೆಂಗಳೂರು, ಮಾರ್ಚ್ 22– ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪತ್ರ ರಿಜಿಸ್ಟರ್ ಮಾಡಿಸುತ್ತಿದ್ದವರಿಂದ ಪಡೆಯುತ್ತಿದ್ದ ಮಾಮೂಲಿ ಈಗ ಕಚೇರಿಯ ಬಾಗಿಲ ಹೊರಗೇ ನಡೆಯುವ ವ್ಯವಹಾರ.
ಕಚೇರಿಯ ಮಾಮೂಲು ತಪ್ಪಿಸಲು ಸಚಿವರು ಕ್ರಮ ಕೈಗೊಳ್ಳಲಾರಂಭಿಸಿದ ಮೇಲೆ ಆಫೀಸನ್ನು ಬಿಟ್ಟು ವ್ಯವಹಾರವು ಪತ್ರ ಮಾರುವವರ ಹತ್ತಿರವೇ ನಡೆಯಲು ಶುರುವಾಗಿದೆ. ಜೊತೆಗೆ ಕೆಲಸ ಇಲ್ಲದೆ ಇರುವವರೂ ಅಲ್ಲಿ ಬಂದು ಮಾಮೂಲಿಯ ವಸೂಲಿಯಲ್ಲಿ ತೊಡಗುತ್ತಾರಂತೆ– ಇಂದು ಸಚಿವ ಎಚ್.ಹುಚ್ಚಮಾಸ್ತಿಗೌಡರು ವಿಧಾನ ಪರಿಷತ್ತಿನಲ್ಲಿ ಮಾಮೂಲಿ ವಸೂಲಿಯ ಸ್ಥಳ ಬದಲಾದ ಪರಿಸ್ಥಿತಿಯನ್ನು ವಿವರಿಸಿದರು.
‘ಮೊದಲು ಕಚೇರಿಗೆ ಹೋಗುವಾಗ ತಮ್ಮಲ್ಲಿದ್ದ ಹಣ ಘೋಷಿಸಿಕೊಳ್ಳಬೇಕು ಎಂದು ಸೂಚನೆ ಕೊಡಲಾಗಿತ್ತು. ಜೇಬಿನಲ್ಲಿ ಐದೇ ರೂಪಾಯಿ ಇದ್ದರೂ ನೂರು ರೂಪಾಯಿ ಇದೆ ಅಂತ ಘೋಷಿಸಿಕೊಳ್ಳಲು ಅದರಿಂದ ಅವಕಾಶವಾಯಿತು’ ಎಂದರು.