ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಕೆಲವು ಸಂಸತ್ ಸದಸ್ಯರ ಯತ್ನ
ಬೆಂಗಳೂರು, ಮಾರ್ಚ್ 19– ರಾಜ್ಯದ ಕೆಲ ಸಂಸತ್ ಸದಸ್ಯರು ಈ ತಿಂಗಳ ಅಂತ್ಯದೊಳಗೆ ಪ್ರಧಾನಿ ಹಾಗೂ ಕಾಂಗ್ರೆಸ್ ಅಧ್ಯಕ್ಷರನ್ನು ಕಂಡು, ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಬದಲಾವಣೆಯಾಗಬೇಕೆಂದು ಒತ್ತಾಯ ಮಾಡಲಿದ್ದಾರೆ.
ವಿಧಾನಸಭೆಯ ಮರು ಚುನಾವಣೆಯಲ್ಲಿ ಕಾಂಗ್ರೆಸ್ಸಿಗಾದ ಸೋಲು ಹಾಗೂ ಅದಕ್ಕೆ ಸಂಬಂಧಿಸಿದ ಬೆಳವಣಿಗೆಯ ಕಾರಣ ‘ಏಕಾಭಿಪ್ರಾಯವುಳ್ಳ’ ಸಂಸತ್ ಸದಸ್ಯರು ಸರ್ಕಾರ ಹಾಗೂ ಸಂಸ್ಥೆಯಲ್ಲಿ ನಾಯಕತ್ವದ ಬದಲಾವಣೆಗೆ ಪ್ರಯತ್ನ ಮಾಡಲಿದ್ದಾರೆ ಎಂದು ಸಂಸದ ಎಸ್.ಬಿ. ಪಾಟೀಲ್ ತಿಳಿಸಿದರು.
ಬಿಹಾರದಲ್ಲಿ ವ್ಯಾಪಕ ಹಿಂಸಾಚಾರ ಐದು ಕಡೆ ಗುಂಡಿಗೆ 10 ಜನ ಬಲಿ
ಪಟನಾ, ಮಾರ್ಚ್ 19– ಪಟನಾ, ಮುಂಘೇರ್, ಛಾಪ್ಡ, ದೇವಗಢ ಮತ್ತು ರಾಂಚಿಗಳಲ್ಲಿ ಇಂದು ಲೂಟಿ ಮತ್ತು ಬೆಂಕಿ ಹಚ್ಚುವ ಕೃತ್ಯಗಳಲ್ಲಿ ತೊಡಗಿದ್ದ ಗುಂಪುಗಳ ಮೇಲೆ ಗುಂಡು ಹಾರಿಸಿದ ಪರಿಣಾಮ ಕನಿಷ್ಠ 10 ಜನ ಸತ್ತು 31 ಜನ ಗಾಯಗೊಂಡರು.
ಪಟನಾದಲ್ಲಿ ಇಡೀ ವಿಶ್ವವಿದ್ಯಾನಿಲಯದ ಆವರಣವನ್ನು ಸೇನೆಗೆ ಒಪ್ಪಿಸಲಾಗಿದೆ.