ಬೆಂಗಳೂರು, ಮೇ 15– 90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿಷಯಗಳಿಗೆ ಅನುಕ್ರಮವಾಗಿರುವ ನೂತನ ರೀತಿಯ ಕನ್ನಡ ವಿಶ್ವಕೋಶ ರಚಿಸಲು ಸರ್ಕಾರ ಇಂದು ನಿರ್ಧಾರ ಕೈಗೊಂಡಿತು.
ಈಗಾಗಲೇ ಸಾರ್ವತ್ರಿಕ ಉಪಯೋಗಗಳಿಗೆ ಸಂಬಂಧಿಸಿದ ವಿಶ್ವಕೋಶವನ್ನು ಸಿದ್ಧಪಡಿಸುತ್ತಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಈ ಕಾರ್ಯವನ್ನೂ ವಹಿಸಿಕೊಡಲಾಗುವುದು.
ಒಟ್ಟು 30 ಸಂಪುಟಗಳನ್ನು ಸಿದ್ಧಗೊಳಿಸಲು ಬೇಕಾಗುವ ಅವಧಿ 15 ವರ್ಷಗಳು. ಸರ್ಕಾರವು ಪ್ರತೀ ವರ್ಷ 4 ಲಕ್ಷ ರೂಪಾಯಿಗಳಂತೆ ಒಟ್ಟು 60 ಲಕ್ಷ ರೂಪಾಯಿಗಳ ಗ್ರ್ಯಾಂಟು ಕೊಡುವುದು. ಉಳಿದ 30 ಲಕ್ಷ ರೂಪಾಯಿಗಳನ್ನು ವಿಶ್ವವಿದ್ಯಾಲಯ ಹೊಂದಿಸಿಕೊಳ್ಳಬೇಕಾಗುವುದು.
ಮಂಗಳೂರು– ಮುಂಬೈ ರೈಲ್ವೆಗೆ ಸರ್ವೆ
ಬೆಂಗಳೂರು, ಮೇ 15– ಮುಂಬೈನಿಂದ ಮಂಗಳೂರಿಗೆ ಪಶ್ಚಿಮ ಕರಾವಳಿ ರೈಲು ಮಾರ್ಗ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಸರ್ವೆ ನಡೆಸಲು ತೀರ್ಮಾನಿಸಿದೆ.
ಬ್ರಾಡ್ಗೇಜ್ ಮಾರ್ಗ ನಿರ್ಮಾಣದ ಈ ಸರ್ವೆಗೆ 22 ಲಕ್ಷ ರೂಪಾಯಿ ಖರ್ಚಾಗುವುದೆಂದು ಅಂದಾಜು ಮಾಡಲಾಗಿದೆ.