ಬೆಂಗಳೂರು, ಜೂನ್ 22– ‘ಮೈಸೂರು ಗಂಧದ ಸಾಬೂನು ಕೊಳ್ಳಬೇಡಿ, ಅಲ್ಲಿನ ಅಗರಬತ್ತಿಯನ್ನು ಹಚ್ಚಬೇಡಿ’ ಎಂದು ಮುಂಬೈನಲ್ಲಿ ಶಿವಸೇನೆಯವರಿಂದ ಮಹಾರಾಷ್ಟ್ರೀಯರಿಗೆ ಉಪದೇಶ ಆರಂಭವಾಗಿದೆಯಂತೆ.
‘ಅದೇ ರೀತಿಯ ಮಹಾರಾಷ್ಟ್ರ ವಿರೋಧಿ ಚಳವಳಿ ಬೇರೆ ಕಡೆಗಳಲ್ಲಾದರೆ ಪರಿಸ್ಥಿತಿ ಏನಾದೀತೆಂಬುದನ್ನು ಶಿವಸೇನೆ ಗಮನಿಸಬೇಕು’ ಎಂದು ಎ.ಪಿ.ಅಪ್ಪಣ್ಣ ಹೇಳಿದರು.
ಬಿಹಾರ ವಿಧಾನಸಭೆಯಲ್ಲಿ ಗೊಂದಲ
ಪಟ್ನಾ, ಜೂನ್ 22– ಸಭಾಧ್ಯಕ್ಷರ ರೂಲಿಂಗ್ ವಿರುದ್ಧ ವಿರೋಧ ಪಕ್ಷದ ಸದಸ್ಯರು ಉಗ್ರ ಪ್ರತಿಭಟನೆ ವ್ಯಕ್ತಪಡಿಸಿದಾಗ ತೀವ್ರ ಗೊಂದಲವುಂಟಾದ ಕಾರಣ ಇಂದು ಬಿಹಾರ ವಿಧಾನಸಭೆಯನ್ನು ಅರ್ಧ ಗಂಟೆ ಕಾಲ ಮುಂದೂಡಲಾಗಿತ್ತು.
ಗೇಣಿ ಶಾಸನ ತಿದ್ದುಪಡಿ ಮಸೂದೆ ಧ್ವನಿಮತದಿಂದ ಅಂಗೀಕೃತವಾದ ನಂತರ ಗಲಾಟೆ ಪ್ರಾರಂಭವಾಯಿತು. ತಿದ್ದುಪಡಿ ಮಸೂದೆಯನ್ನು ಮತಕ್ಕೆ ಹಾಕಬೇಕೆಂಬ ಪಿಎಸ್ಪಿಯ ನರ್ಮದೇಶ್ವರ ಆಜಾದ್ ಅವರ ಬೇಡಿಕೆಯನ್ನು ತಿರಸ್ಕರಿಸಿ ಮಸೂದೆ ಧ್ವನಿಮತದಿಂದ ಅಂಗೀಕೃತವಾಯಿತೆಂದು ಸಭಾಧ್ಯಕ್ಷರು ಘೋಷಿಸಿದರೆಂದು ವಿರೋಧಿ ಸದಸ್ಯರು ಆಪಾದಿಸಿದರು. ಆಗ ಗೊಂದಲವುಂಟಾಯಿತು.