ಆರ್.ಎಸ್.ಎಸ್ ಶಸ್ತ್ರ ತರಬೇತಿ ಕಾರ್ಯಕ್ರಮ ನಿರ್ಬಂಧಕ್ಕೆ ಸುಗ್ರೀವಾಜ್ಞೆ
ನವದೆಹಲಿ, ಜೂನ್ 20: ಶಾಖೆಗಳನ್ನು ನಡೆಸುವುದು, ಬಾಕುಗಳ ಬಳಕೆಯಲ್ಲಿ ಶಿಕ್ಷಣ ನೀಡುವುದೇ ಮುಂತಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ತಡೆಗಟ್ಟಲು ಸರಕಾರವು ಉಗ್ರವಾದ ಕಾನೂನು ಕ್ರಮಗಳನ್ನು ಆಲೋಚಿಸುತ್ತಿರುವುದಾಗಿ ಇಂದು ಬಲ್ಲ ವಲಯಗಳು ತಿಳಿಸಿವೆ.
ಕಾನೂನುಬಾಹಿರ ಚಟುವಟಿಕೆಗಳ ಶಾಸನದಲ್ಲಿ ಬದಲಾವಣೆಗಳನ್ನು ತರಲು ಅದನ್ನು ತಿದ್ದುಪಡಿ ಮಾಡಬೇಕೇ ಅಥವಾ ಇಂಡಿಯನ್ ಪೀನಲ್ ಕೋಡ್ ಅನ್ನು ಬದಲಾಯಿಸಬೇಕೇ ಎಂಬ ಬಗೆಗೆ ಇನ್ನೂ ನಿರ್ಧರಿಸಬೇಕಾಗಿದೆಯೆಂದು ಆ ಮೂಲಗಳು ಹೇಳಿವೆ. ಅವಶ್ಯವಾದರೆ ಸರಕಾರ ಸುಗ್ರೀವಾಜ್ಞೆ ಪ್ರಕಟಿಸಿ ಮುಂದಿನ ಸಂಸತ್ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬಹುದು.