ಟಿಕ್ಕಾ, ಮಾಣೆಕ್ ಷಾ ನಡುವೆ ಚರ್ಚೆ: ಪಾಕ್ ಸಲಹೆಗೆ ಭಾರತದ ಅಸ್ತು
ನವದೆಹಲಿ, ನವೆಂಬರ್ 24– ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಗುರುತಿಸುವ ಕಾರ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿ ಶಿಮ್ಲಾ ಒಪ್ಪಂದದ ಅನುಜಷ್ಠಾನವನ್ನು ತ್ವರಿತಗೊಳಿಸಲು ಸೇನೆಯ ದಂಡನಾಯಕರ ಮಟ್ಟದಲ್ಲಿ ಮಾತುಕತೆ ನಡೆಸಬೇಕೆಂಬ ಪಾಕಿಸ್ತಾನದ ಸಲಹೆಯನ್ನು ಭಾರತ ತತ್ವಶಃ ಅಂಗೀಕರಿಸಿದೆ.
ಆದರೆ ಭಾರತ ಸೇನೆಯ ದಂಡ ನಾಯಕ ಜನರಲ್ ಮಾಣೆಕ್ ಷಾ ಮತ್ತು ಪಾಕಿಸ್ತಾನದ ದಂಡನಾಯಕ ಜನರಲ್ ಟಿಕ್ಕಾ ಖಾನ್ ಅವರು ಎಲ್ಲಿ ಮಾತುಕತೆಗಾಗಿ ಸೇರುವರು ಎಂಬುದನ್ನು ಪಾಕಿಸ್ತಾನದ ಜತೆ ಸಮಾಲೋಚನೆ ನಡೆಸಿದ ನಂತರ ನಿರ್ಧರಿಸಲಾಗುವುದು. ಈ ಮಾತುಕತೆ ಬಹುಶಃ ಮುಂದಿನ ವಾರ ನಡೆಯಬಹುದು.
ಹತ್ತು ಸಹಸ್ರ ಕಾರ್ಮಿಕರಿಗೆ ತಿಂಗಳ ವೇತನ ವ್ಯವಸ್ಥೆ
ಬೆಂಗಳೂರು, ನವೆಂಬರ್ 24– ದಶಕಗಳಿಂದ ದಿನಗೂಲಿಯ ಮೇಲೆ ದುಡಿಯುತ್ತಿರುವ ಕೆ.ಜಿ.ಎಫ್.ನ ಭಾರತ ಚಿನ್ನದ ಗಣಿಯು ಸುಮಾರು 10,000 ಮಂದಿ ಕೆಲಸಗಾರರನ್ನು ತಿಂಗಳ ವೇತನದ ಶಾಶ್ವತ ವ್ಯವಸ್ಥೆಗೆ ಪರಿವರ್ತಿಸುವ ಮಹತ್ತಾದ ಒಪ್ಪಂದಕ್ಕೆ ಗಣಿಯ ಆಡಳಿತ ಹಾಗೂ ಕಾರ್ಮಿಕ ನಾಯಕರು ಸಹಿ ಮಾಡಿದ್ದಾರೆ.