ನವದೆಹಲಿ, ಡಿ. 1– ಮಹಾಜನ್ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮಹಾರಾಷ್ಟ್ರ– ಮೈಸೂರು ಗಡಿ ವಿವಾದದ ಇತ್ಯರ್ಥಕ್ಕಾಗಿ ಸರ್ಕಾರವು ಸಂಸತ್ತಿನಲ್ಲಿ ಯಾವುದಾದರೂ ವಿಧೇಯಕ ಮಂಡಿಸಿದರೆ, ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ಮತ ಸ್ವಾತಂತ್ರ್ಯ ನೀಡಬೇಕೆಂದು ಮೈಸೂರು ಶಾಸಕರ ಸರ್ವಪಕ್ಷ ನಿಯೋಗ ಬಯಸಿದೆ.
ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಡನೆ ನಿಯೋಗ ನಿನ್ನೆ ನಡೆಸಿದ ಚರ್ಚೆಗಳ ಬಗೆಗೆ ಮೈಸೂರಿನ ಸಂಸತ್ ಸದಸ್ಯರಿಗೆ ಇಂದು ವಿವರ ಕೊಡುವಾಗ ನಿಯೋಗದ ನಾಯಕರಾದ ಶ್ರೀ ಎಸ್. ಶಿವಪ್ಪನವರು ಈ ವಿಷಯ ತಿಳಿಸಿದರು.
ಅಣ್ವಸ್ತ್ರ ಸ್ಪರ್ಧೆ ನಿಲ್ಲಿಸಲು ಅಗ್ರ ರಾಷ್ಟ್ರಗಳಿಗೆ ರಾಜಕೀಯ ಸಮಿತಿ ಕರೆ
ವಿಶ್ವಸಂಸ್ಥೆ, ಡಿ. 1– ಅಣ್ವಸ್ತ್ರಗಳ ಸ್ಪರ್ಧೆಯನ್ನು ಕೂಡಲೇ ನಿಲ್ಲಿಸುವಂತೆ ಅಣ್ವಸ್ತ್ರ ಪಡೆದಿರುವ ರಾಷ್ಟ್ರಗಳನ್ನು ಒತ್ತಾಯಪಡಿಸಲು ಜನರಲ್ ಅಸೆಂಬ್ಲಿಯನ್ನು ಕೋರುವ ನಿರ್ಣಯವೊಂದನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ರಾಜಕೀಯ ಸಮಿತಿಯು ನಿನ್ನೆ ಭಾರಿ ಬಹುಮತದಿಂದ ಅಂಗೀಕರಿಸಿತು.
ಭಾರತ ಮತ್ತಿತರ 14 ರಾಷ್ಟ್ರಗಳು ಮಂಡಿಸಿದ್ದ ಈ ನಿರ್ಣಯದಲ್ಲಿ ಅಣ್ವಸ್ತ್ರ ಸ್ಪರ್ಧೆ, ಅಣ್ವಸ್ತ್ರ ಪರೀಕ್ಷಾ ಸ್ಫೋಟಗಳೆಲ್ಲವನ್ನೂ ನಿಲ್ಲಿಸುವಂತೆ ಒತ್ತಾಯಪಡಿಸಲಾಗಿದೆ.