50 ವರ್ಷಗಳ ಹಿಂದೆ: ಸೋಮವಾರ 5.7.1971

ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ರೈಲ್ವೆ ಕಾಂಟ್ರ್ಯಾಕ್ಟ್, ಸಾಲದ ಸೌಲಭ್ಯ: ಕೆಂಗಲ್
ಪುಣೆ, ಜುಲೈ 4– ರಾಷ್ಟ್ರದಲ್ಲಿ ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಲು ತಮ್ಮ ಇಲಾಖೆ ಯೋಜನೆ ಹಾಕಿಕೊಂಡಿರುವುದನ್ನು ರೈಲ್ವೆ ಸಚಿವ ಕೆ. ಹನುಮಂತಯ್ಯ ಅವರು ಇಂದು ಇಲ್ಲಿ ಪ್ರಕಟಿಸಿದರು.
ಇಲಾಖೆಯ ಭಾರಿ ನಿರ್ಮಾಣಗಳನ್ನು ಸಂಸ್ಥೆಗಳಿಗೆ ವಹಿಸುವ ಪುರಾತನ ಕಾಂಟ್ರ್ಯಾಕ್ಟ್ ಪದ್ಧತಿಯಿಂದ ಈಗ ದೂರ ಸರಿಯುತ್ತಿರುವುದಾಗಿ ಅವರು ಹೇಳಿದರು.
ನಿರ್ದಿಷ್ಟ ಕಾಲದಲ್ಲಿ ನಿರ್ಮಾಣ ಕಾರ್ಯಗಳನ್ನು ಮುಗಿಸಲು ನಿರುದ್ಯೋಗಿ ಎಂಜಿನಿಯರಿಂಗ್ ಪದವೀಧರರಿಗೆ ಕಾಂಟ್ರ್ಯಾಕ್ಟ್ ಮತ್ತು ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಕಲ್ಪಿಸುವುದನ್ನು ತಮ್ಮ ಇಲಾಖೆ ಪರಿಶೀಲಿಸುತ್ತಿರುವುದೆಂದು ಅವರು ತಿಳಿಸಿದರು.
ಗಂಗಾ, ಕಾವೇರಿ ಸಂಪರ್ಕಕ್ಕೆ ಸರ್ವೆ: ಕೇಂದ್ರದ ನಿರ್ಧಾರ
ಪುಣೆ, ಜುಲೈ 4– ಗಂಗಾ ಮತ್ತು ಕಾವೇರಿ ನದಿಗಳಿಗೆ ಸಂಪರ್ಕ ಕಲ್ಪಿಸಲು ವಿಶ್ವರಾಷ್ಟ್ರ ಸಂಸ್ಥೆ ತಜ್ಞರ ನೆರವಿನಿಂದ ಸರ್ವೆ ಕಾರ್ಯ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಯೋಜನಾ ಖಾತೆ ರಾಜ್ಯ ಸಚಿವ ಶ್ರೀ ಮೋಹನ ಧಾರಿಯ ಇಂದು ಇಲ್ಲಿ ತಿಳಿಸಿದರು.
ಯೋಜನಾ ಆಯೋಗವು ಈಗಾಗಲೆ ಈ ಕಾರ್ಯಕ್ಕೆ ಅನುಮತಿ ನೀಡಿರುವುದಾಗಿಯೂ ಹಾಗೂ ಸರ್ವೆ ಕಾರ್ಯವನ್ನು ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಖಾತೆಗೆ ವಹಿಸಿರುವುದಾಗಿಯೂ ಅವರು ಪತ್ರಕರ್ತರೊಡನೆ ಮಾತನಾಡುತ್ತ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.