ಅಸ್ಪೃಶ್ಯತೆ ಅನುಸರಣೆಗೆ ಪುಂಡುಗಂದಾಯದ ದಂಡ
ಬೆಂಗಳೂರು, ಸೆ. 10– ಹರಿಜನ ಮತ್ತು ಗಿರಿಜನರನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ಗ್ರಾಮಗಳ ಮೇಲೆ ತಲೆಗಂದಾಯವನ್ನು ಹಾಕಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಸಮಾಜಕಲ್ಯಾಣ ಸಚಿವ ಶ್ರೀ ಎಂ.ಮಲ್ಲಿಕಾರ್ಜುನಸ್ವಾಮಿ ಅವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.
ಸಂತೇಮಾರಹಳ್ಳಿಯಲ್ಲಿ ಹರಿಜನ ಗಿರಿಜನರ ವಿರುದ್ಧ ಸವರ್ಣ ಹಿಂದುಗಳು ಸಾಮಾಜಿಕ ಬಹಿಷ್ಕಾರ ಹಾಕಿರುವ ಸಂಬಂಧದಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಇತರರು ಅಲ್ಲಿಗೆ ಹೋಗಿ ಸುವರ್ಣ ಹಿಂದುಗಳೂ ಮತ್ತು ಹರಿಜನರನ್ನು ಕೂಡಿಸಿ ಮಾತುಕತೆ ನಡೆಸಿ, ಹೀಗೆ ಮಾಡುವುದು ಸರಿಯಲ್ಲ ಎಂದು ತಿಳಿಸಲಾಗಿದೆ ಎಂದು ಸಚಿವರು ಶ್ರೀ ಕೆ.ಸಿದ್ದಯ್ಯ ಅವರ ಗೈರುಹಾಜರಿಯಲ್ಲಿ ಪ್ರಶ್ನೆ ಕೇಳಿದ ಶ್ರೀ ರಾಮಸ್ವಾಮಿ ಅವರಿಗೆ ಹೇಳಿದರು.
ಸ್ವೇಚ್ಛೆಯಾಗಿ ಮೋಟಾರ್ ಡ್ರೈವಿಂಗ್ ಲೈಸನ್ಸ್ ನೀಡಿಕೆ ಎಂದು ಮುಖ್ಯಮಂತ್ರಿ ಟೀಕೆ
ಬೆಂಗಳೂರು, ಸೆ. 10– ಮೋಟಾರ್ ವಾಹನಗಳನ್ನು ನಡೆಸಲು ಸಂಬಂಧಪಟ್ಟ ಇಲಾಖೆಯು ಸ್ವೇಚ್ಛೆಯಾಗಿ ಲೈಸನ್ಸ್ಗಳನ್ನು ನೀಡುತ್ತಿರುವುದನ್ನು ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು ಇಂದು ಇಲ್ಲಿ ಟೀಕಿಸಿ, ‘ಡ್ರೈವಿಂಗ್ ಲೈಸೆನ್ಸ್’ ಹೇಗೆ ಸಿಗುತ್ತೆಂಬುದನ್ನು ಅದನ್ನು ಪಡೆದವರನ್ನು ಕೇಳಿದರೆ ಗೊತ್ತಾಗುತ್ತದೆ ಎಂದರು.
‘ಸಂಚಾರಿ ಸಪ್ತಾಹ’ವನ್ನು ರವೀಂದ್ರಕಲಾ ಕ್ಷೇತ್ರದಲ್ಲಿ ಉದ್ಘಾಟಿಸಿದ ಅವರು ಮೋಟಾರ್ ವಾಹನಗಳಿಂದ ಆಗುವ ಅಪಘಾತಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ನೀಡುವ ಇಲಾಖೆಯ ಸಹಕಾರವೂ ಅಗತ್ಯವೆಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.