ಮನೆಗೊಬ್ಬರಿಗೆ ನೌಕರಿ ರಾಜ್ಯದಲ್ಲಿ ಯೋಜನೆ ಜಾರಿ ಬೆಂಗಳೂರು, ಏ. 8– ‘ಮನೆಗೊಬ್ಬ ದುಡಿಮೆಗಾರ’– ಕೇಂದ್ರ ಸರ್ಕಾರದ ಈ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಇದಕ್ಕಾಗಿ ವೆಚ್ಚ: ಈ ವರ್ಷ ಪ್ರತೀ ಜಿಲ್ಲೆಗೆ ಹನ್ನೆರಡೂವರೆ ಲಕ್ಷ ರೂ.
1971–72ನೇ ಸಾಲಿನಲ್ಲಿ ಗ್ರಾಮಾಂತರ ನಿರುದ್ಯೋಗ ನಿವಾರಣೆ ಕ್ಷಿಪ್ರ ಯೋಜನೆಗಾಗಿ ಮೈಸೂರು ರಾಜ್ಯಕ್ಕೆ ಕೇಂದ್ರ ಸರ್ಕಾರ 237.5 ಲಕ್ಷ ರೂ. ನೀಡಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗದ ಪ್ರದೇಶಗಳನ್ನು ಆರಿಸಿ ಪ್ರತೀ ಮನೆಯಲ್ಲಿ ಕನಿಷ್ಠ ಒಬ್ಬನಾದರೂ ಸಂಪಾದಿಸುವವನು ಇರುವಂತೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶ.
** ಭಾರತಕ್ಕೆ 300ಕ್ಕೂ ಹೆಚ್ಚು ನಿರಾಶ್ರಿತರು ನವದೆಹಲಿ, ಏ. 8– ಸಿಂದ್ನಿಂದ ರಾಜಸ್ಥಾನದ ಬಾರ್ಮೇರ್ ಜಿಲ್ಲೆಗೆ ಕಳೆದ ಎರಡು ದಿನಗಳಲ್ಲಿ 300ಕ್ಕೂ ಹೆಚ್ಚು ನಿರಾಶ್ರಿತರು ಬಂದಿದ್ದಾರೆ.
ಮಾನವೀಯ ಕಾರಣಗಳಿಗಾಗಿ ನಿರಾಶ್ರಿತರಿಗೆ ಗಡಿ ದಾಟಿ ಬರಲು ಅವಕಾಶ ಕೊಡಲು ನವದೆಹಲಿ ನಿರ್ಧರಿಸಿದೆ. ಪೂರ್ವ ಬಂಗಾಳದಲ್ಲಿ ಉಪ್ಪು, ಸಾಸಿವೆ ಎಣ್ಣೆ, ಸೀಮೆಎಣ್ಣೆ ಮತ್ತು ಔಷಧಿಗಳ ತೀವ್ರ ಕೊರತೆ ತಲೆದೋರಿದೆ.