ಹುಬ್ಬಳ್ಳಿಯಲ್ಲಿ ಮತ್ತೆ ಗಲಭೆ– ಅಗ್ನಿಸ್ಪರ್ಶ: ಲಾಠಿಪ್ರಹಾರ, ಕರ್ಫ್ಯೂ ಹುಬ್ಬಳ್ಳಿ, ಮಾರ್ಚ್ 21– ಇಂದು ಹುಬ್ಬಳ್ಳಿಯ ಅನೇಕ ಕಡೆಗಳಲ್ಲಿ ಹಠಾತ್ತನೆ ಅಗ್ನಿಸ್ಪರ್ಶ, ಕಲ್ಲು ಮತ್ತು ಸೋಡಾ ಶೀಶೆಗಳ ಎಸೆತದ ಪ್ರಕರಣಗಳು ಸಂಭವಿಸಿ ಪೋಲಿಸರು ಲಾಠಿ ಪ್ರಹಾರ ಮಾಡಿದರಲ್ಲದೆ ಕರ್ಫ್ಯೂ ಜಾರಿಗೆ ತರಲಾಯಿತು.
ಕರ್ಫ್ಯೂ ಇಂದು ಮತ್ತು ನಾಳೆ ಸಂಜೆ 7ರಿಂದ ಬೆಳಿಗ್ಗೆ 8 ಗಂಟೆವರೆಗೆ ಹುಬ್ಬಳ್ಳಿ ನಗರ ಮತ್ತು ಹತ್ತು ಕಿಲೊಮೀಟರ್ ಸುತ್ತಲ ಪ್ರದೇಶದಲ್ಲಿ ಜಾರಿಯಲ್ಲಿರುತ್ತದೆ.
ಕಳೆದ ಶುಕ್ರವಾರ ಇಲ್ಲಿಯ ಕಾರ್ಪೋರೇಷನ್ ಕಚೇರಿ ಬಳಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಗಳಲ್ಲಿ ಇರಿತಕ್ಕೊಳಗಾಗಿದ್ದ 22 ವರ್ಷದ ಯುವಕ ಶ್ರೀಕಾಂತ್ ಚಿಪ್ಕರ್ ಅವರು ಇಂದು ಮೃತರಾದ ಸುದ್ದಿ ಕೇಳಿದ ಕೂಡಲೇ ನಗರದ ಕೆಲವು ಭಾಗಗಳಲ್ಲಿ ಮತ್ತೆ ಬೆಂಕಿ ಹಚ್ಚುವ ಹಾಗೂ ಗೂಂಡಾಗಿರಿ ಪ್ರಕರಣಗಳು ಆರಂಭವಾದವು.
ರಾಜ್ಯ ಸಂಪುಟ ರಚನೆ: ದೆಹಲಿಯಲ್ಲಿ ಮುಖ್ಯರೊಡನೆ ಅರಸು ಮಾತುಕತೆ ನವದೆಹಲಿ, ಮಾರ್ಚ್ 21– ಮೈಸೂರು ಸಂಪುಟದ ಉಳಿದ ಸಚಿವರ ಆಯ್ಕೆ ಸಂಬಂಧದಲ್ಲಿ ಇಲ್ಲಿಗೆ ಆಗಮಿಸಿರುವ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಇಂದು ಹೈಕಮಾಂಡಿನ ಮುಖ್ಯರೊಡನೆ ಸಮಾಲೋಚನೆ ನಡೆಸಿದರು.
ಅರಸು ಅವರು ಇಂದು ರಕ್ಷಣಾ ಸಚಿವ ಜಗಜೀವನರಾಂ ಅವರನ್ನೂ ಕಂಡಿದ್ದರು.