ನವದೆಹಲಿ, ಮೇ 21– ಅಸ್ಪೃಶ್ಯತೆ ಮೊಕದ್ದಮೆಗಳಲ್ಲಿ ಶಿಕ್ಷೆ ಹೆಚ್ಚಿಸಬೇಕೆಂದು ಇಂದು ಇಲ್ಲಿ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಚಿವ ಸಿದ್ಧಾರ್ಥ ಶಂಕರರಾಯ್ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ರಾಜ್ಯಗಳ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವರ ಸಮ್ಮೇಳನವು ಅವಿರೋಧವಾಗಿ ಸರ್ಕಾರಕ್ಕೆ ಶಿಫಾರಸು ಮಾಡಿತು.
ಎಸಗಿದ ಅಪರಾಧಗಳ ಸಂಖ್ಯೆಯನ್ನು ಆಧರಿಸಿ ಕನಿಷ್ಠ ಮೂರು ತಿಂಗಳ ಸಜಾ ಜತೆಗೆ 50 ರೂಪಾಯಿಗಳ ದಂಡದಿಂದ ಆರಂಭಿಸಿ ಪರಮಾವಧಿಯಾಗಿ ಎರಡು ವರ್ಷಗಳ ಸಜಾ ಹಾಗೂ 1,000 ರೂಪಾಯಿ ದಂಡ ವಿಧಿಸಬೇಕೆಂದು ಸಮ್ಮೇಳನವು ಸಲಹೆ ಮಾಡಿತು.
ಖಜಾನೆ ಮೂಲಕ ನಗದು ಸಂಬಳ: ಯೋಜನೆ ನ್ಯೂನತೆ
ಬೆಂಗಳೂರು, ಮೇ 21– ಖಾಸಗಿ ಶಾಲೆಗಳ ಶಿಕ್ಷಕರಿಗೆ ಚೆಕ್ಗಳ ಬದಲು, ಖಜಾನೆ ಮೂಲಕ ನಗದು ರೂಪದಲ್ಲಿ ಸಂಬಳ ಕೊಡಲು ಸಾಧ್ಯವೇ ಎಂಬ ರಾಜ್ಯಪಾಲರ ಸೂಚನೆಯನ್ನು ಕಳೆದ ಎರಡು ದಿನಗಳಿಂದ ಪರಿಶೀಲಿಸುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಈ ಸಲಹೆಯೂ ನ್ಯೂನತೆಯಿಂದ ಹೊರತಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.