ಹೈದರಾಬಾದ್, ಜ. 2– ಮಹಾಜನ್ ಆಯೋಗದ ವರದಿ ಮೂಲೆಯಪಾಲಾಗಿಲ್ಲವೆಂದು ಇಂದು ಇಲ್ಲಿ ತಿಳಿಸಿದ ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು, ವರದಿಯನ್ನು ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿಯವರನ್ನು ಒತ್ತಾಯಪಡಿಸುತ್ತಿರುವುದಾಗಿ ಹೇಳಿದರು.
ಪತ್ರಿಕಾ ವರದಿಗಾರರ ಸಂಘದಲ್ಲಿ ಮಾತನಾಡುತ್ತಿದ್ದ ಅವರು, ವರದಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬೇಕೆಂದು ತಾವು ಅಪೇಕ್ಷಿಸುವುದಿಲ್ಲವಾಗಿ ತಿಳಿಸಿದರು. ‘ಅದು ಕೈಗೆ ಬಂದಿರುವ ವರದಿ. ಅದು ಹೇಗಿದೆಯೋ ಹಾಗೆ ಅದನ್ನು ಕಾರ್ಯಗತಗೊಳಿಸಬೇಕು’ ಎಂದರು ಶ್ರೀ ಪಾಟೀಲ್.
ಎಂ.ಸಿ. ಶಿವಾನಂದ ಶರ್ಮರ ನಿಧನ
ಬೆಂಗಳೂರು, ಜ. 2– ಶಿಕ್ಷಣ ಪ್ರಸಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಶ್ರೀ ಎಂ.ಸಿ. ಶಿವಾನಂದ ಶರ್ಮ ಅವರು ಇಂದು ಬೆಳಿಗ್ಗೆ ಹೃದ್ರೋಗದಿಂದ ಹಠಾತ್ ನಿಧನರಾದರು.
ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯ ಶಿಕ್ಷಣ ಸಂಸ್ಥೆ ಹಾಗೂ ತಿರುಮಕೂಡ್ಲು ನರಸೀಪುರದ ಗ್ರಾಮ ವಿದ್ಯೋದಯ ಸಂಘದ ಸ್ಥಾಪಕ ಕಾರ್ಯದರ್ಶಿಗಳಾಗಿದ್ದ ಶ್ರೀ ಶಿವಾನಂದ ಶರ್ಮ ಅವರಿಗೆ 58 ವರ್ಷ ವಯಸ್ಸಾಗಿತ್ತು. ಕೆಂಗೇರಿ ಬಳಿ ಇರುವ ಆರ್.ವಿ. ಎಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಿತು.
71–72 ರಿಂದ ರಾಜ್ಯದ ಎಲ್ಲ ಕಾಲೇಜುಗಳಲ್ಲಿ 2 ವರ್ಷದ ಪಿ.ಯು.ಸಿ.
ಬೆಂಗಳೂರು, ಜ. 2– ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಎರಡು ವರ್ಷದ ಪಿ.ಯು.ಸಿ. ಶಿಕ್ಷಣ 1971–72ರಿಂದ ಜಾರಿಗೆ ಬರಲಿದೆ.
ಇಂಟರ್ ಮೀಡಿಯೇಟ್ ಶಿಕ್ಷಣ ರದ್ದಾದ ನಂತರ ಒಂದು ವರ್ಷದ ಪಿ.ಯು.ಸಿ. ಜಾರಿಗೆ ಬಂದಿತ್ತು. ಈಗ ಪಿ.ಯು.ಸಿ. ಎರಡು ವರ್ಷವಾದರೂ ಪದವಿ ಶಿಕ್ಷಣ ಮಾತ್ರ ಎಂದಿನಂತೆ ಮೂರು ವರ್ಷ ಇರುತ್ತದೆ.
ಈಗಾಗಲೇ 9ನೇ ಸ್ಟಾಂಡರ್ಡ್ಗೆ ನೂತನ ಪಠ್ಯಕ್ರಮ ರೂಪಿಸಲಾಗುತ್ತಿದೆ. ಅದು ಮುಂದಿನ ವರ್ಷದಿಂದ ಜಾರಿಗೆ ಬರಲಿದೆ. ಅದರ ಮುಂದಿನ ವರ್ಷ 10ನೇ ಸ್ಟಾಂಡರ್ಡ್ಗೂ ಹೊಸ ಪಠ್ಯಕ್ರಮ ಅನ್ವಯಿಸಲಾಗುವುದು.
ಎರಡು ವರ್ಷದ ಪಿ.ಯು.ಸಿ. ಶಿಕ್ಷಣಕ್ಕೆ ವಿಶ್ವವಿದ್ಯಾಲಯಗಳ ಕುಲಪತಿಗಳ ಅನುಮೋದನೆ ಇದೆಯೆಂದು ‘ಪ್ರಜಾವಾಣಿ’ಗೆ ಶಿಕ್ಷಣ ಕಾರ್ಯದರ್ಶಿ ಶ್ರೀ ಟಿ.ಆರ್. ಜಯರಾಮನ್ ತಿಳಿಸಿದರು.
ಅವರು ರಾಜ್ಯಮಟ್ಟದ ಶಿಕ್ಷಣ ಸಲಹಾ ಸಮಿತಿಯು ಒಪ್ಪಿರುವ ಈ ಕಾರ್ಯವನ್ನು ಅನುಷ್ಠಾನಕ್ಕೆ ತರಲು ಪಠ್ಯಕ್ರಮ ರೂಪಿಸಲಾಗುವುದೆಂದರು.