ಬೇಂದ್ರೆ, ಎಸ್ಸೆನ್, ಜೆ.ಪಿ. ನಾಯಕ್ರಿಗೆ ಡಾಕ್ಟರೇಟ್ ಪ್ರಶಸ್ತಿ
ಧಾರವಾಡ, ಡಿ. 14– ಇಂದು ಸಂಜೆ ಛೋಟಾ ಮಹಾಬಲೇಶ್ವರದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾನಿಲಯದ ಹತ್ತೊಂಬತ್ತನೇ ಘಟಿಕೋತ್ಸವ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರಿಗೆ ಡಾಕ್ಟರ್ ಆಫ್ ಲಾಸ್ ಎಂಬ ಗೌರವ ಪ್ರಶಸ್ತಿಯನ್ನೂ ಕನ್ನಡದ ಖ್ಯಾತ ಕವಿ ಡಾ. ದ.ರಾ. ಬೇಂದ್ರೆ ಮತ್ತು ಶಿಕ್ಷಣ ತಜ್ಞ ಶ್ರೀ ಜೆ.ಪಿ. ನಾಯಕ್ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಪ್ರಶಸ್ತಿಯನ್ನೂ ನೀಡಲಾಯಿತು.
‘ಅತ್ತೆ–ಸೊಸೆ ಸಂಬಂಧ’
ಬೆಂಗಳೂರು, ಡಿ. 14– ಕೇಂದ್ರ ಸರಕಾರ ಜೋರಿನ ಅತ್ತೆ. ರಾಜ್ಯ ಸಾಧು ಸೊಸೆ. ರಾಜ್ಯ ಮತ್ತು ಕೇಂದ್ರಗಳ ನಡುವಿನ ಸಂಬಂಧದ ಬಗ್ಗೆ ಶಾಸಕರ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಗೋವೆಯ ಶಾಸಕಿ ಶ್ರೀಮತಿ ಈಲೂ ಮಿರಾಂದಾ ಅವರು ಈ ಹೋಲಿಕೆ ನೀಡಿದಾಗ, ಪಕ್ಕದಲ್ಲಿದ್ದವರೊಬ್ಬರು ಸೇರಿಸಿದರು, ‘ಮಲತಾಯಿ ಧೋರಣೆ’.
‘ಅಲ್ಲ’ ಎಂದರು ಶ್ರೀಮತಿ ಮಿರಾಂದಾ ‘ಕೇಂದ್ರ ಅತ್ತೆ, ರಾಜ್ಯ ಸೊಸೆ. ಇದು ಸಮರ್ಪಕ’ ಎಂದು ಸ್ಪಷ್ಟಪಡಿಸಿದರು.
ಶ್ರೀಮತಿ ಲೀಲಾವತಿ ರೈ ಅವರು, ಸಭೆಯಲ್ಲಿ ಚಿಮ್ಮಿದ ನಗೆಯ ಮಧ್ಯೆ ಹೇಳಿದರು.
‘ಹಾಗಿದ್ದರೆ ಹಳೆಯ ಕಾಲದ ಅತ್ತೆ ಅಂದು ಬಿಡಿ’.
ಯಕ್ಷಗಾನ ಕಲಾವಿದ ಹಾರಾಡಿ ರಾಮಗಾಣಿಗ ಅವರ ನಿಧನ
ಬ್ರಹ್ಮಾವರ, ಡಿ. 14– ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಹಾರಾಡಿ ರಾಮಗಾಣಿಗರು ಡಿ. 11 ರಂದು ಮಧ್ಯಾಹ್ನ 2 ಗಂಟೆಗೆ ಹಾರಾಡಿಯಲ್ಲಿ ನಿಧನಹೊಂದಿದರು. ಶ್ರೀಯುತರಿಗೆ ನಿಧನದ ಕಾಲಕ್ಕೆ 66 ವರ್ಷ ವಯಸ್ಸಾಗಿತ್ತು.
ಹುಬ್ಬಳ್ಳಿ–ಧಾರವಾಡ ಡೈರಿ ಯೋಜನೆ ಆರಂಭ
ಧಾರವಾಡ, ಡಿ. 14– ಇಲ್ಲಿಗೆ ಸಮೀಪದ ರಾಯಾಪುರದಲ್ಲಿ ಹುಬ್ಬಳ್ಳಿ–ಧಾರವಾಡ ಡೈರಿ ಯೋಜನೆಯನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಉದ್ಘಾಟಿಸಿದರು.