ರಾಯಚೂರು, ಮೇ 12– ಹೊಸಪೇಟೆ ಬಳಿಯ ಸಕ್ಕರೆ ಕಾರ್ಖಾನೆಯಿಂದ ಸೋರಿಕೆಯಾದ ರಾಸಾಯನಿಕ ಸೇರ್ಪಡೆಯಿಂದ ವಿಷಯುಕ್ತವಾಗಿರುವ ತುಂಗಭದ್ರಾ ನೀರಿನಲ್ಲಿ ಸತ್ತಿರುವ ಜಲಚರಗಳು ಗಬ್ಬು ನಾರುತ್ತಿರುವುದರಿಂದ ಗಂಗಾವತಿ ತಾಲ್ಲೂಕಿನ ಅನೇಕ ಗ್ರಾಮಗಳ ಜನಜೀವನ ಅಸಹನೀಯವಾಗಿಯೇ ಮುಂದುವರಿದಿದೆ.
ಅನೇಕ ಕಡೆ ವಾಂತಿ, ತಲೆನೋವು, ಹೊಟ್ಟೆ ತೊಳೆಸುವುದು ಮುಂತಾದ ರೋಗದ ಲಕ್ಷಣಗಳು ಕಂಡುಬಂದಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿಯಲು ಬಿಟ್ಟರೆ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂದು ಭೀತಿಪಡಲಾಗಿದೆ.
ಸತ್ತ ಜಲಚರಗಳನ್ನು ಸುಡಲಾಗಿದೆ ಇಲ್ಲವೆ ಹೂಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದಾಗ್ಯೂ ಅಸಂಖ್ಯಾತ ಕೊಳೆತ ಮೀನುಗಳು ತೇಲುತ್ತಿರುವುದು ಕೆಲ ಗ್ರಾಮಗಳಿಗೆ ಭೇಟಿ ನೀಡಿದ ಈ ವರದಿಗಾರನಿಗೆ ಗೋಚರಿಸಿದೆ.
ನದಿ ಹಾಗೂ ಹಳೆ ವಿಜಯನಗರ ಕಾಲುವೆಯಲ್ಲಿ ಕಂದು ಬಣ್ಣದ ನೀರು ಹರಿಯುತ್ತಿದೆ. ಎಲ್ಲಿ ನೋಡಿದರಲ್ಲಿ ಅರ್ಧಂಬರ್ಧ ಕೊಳೆತಿರುವ ಜಲಚರಗಳು ದುರ್ನಾತ ಬೀರುತ್ತಿವೆ.