ಚಂಡೀಗಡ, ಫೆ. 2– ಹರಿಯಾಣದ ಮಟ್ಟಿಗೆ ಹೇಳುವುದಾದರೆ, ಚಂಡೀಗಡ ಇನ್ನೂ ತೆರೆದ ಪ್ರಶ್ನೆಯೇ ಎಂದು ಹರಿಯಾಣ ಮುಖ್ಯಮಂತ್ರಿ ಬನ್ಸಿಲಾಲ್ ಇಂದು ಪತ್ರಕರ್ತರಿಗೆ ತಿಳಿಸಿದರು.
ಚಂಡೀಗಡವು ಹಿಂದಿ ಭಾಷಾ ಪ್ರಾಂತ್ಯವಾಗಿದ್ದು, ಅದು ಹರಿಯಾಣಕ್ಕೆ ದೊರೆಯಬೇಕಾಗಿತ್ತು ಎಂದವರು ನುಡಿದರು.
ಚಂಡೀಗಡವನ್ನು ಪಂಜಾಬಿಗೆ ಕೊಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರ ಹರಿಯಾಣದ ಜನತೆಗೆ ದಿಗ್ಭ್ರಮೆ ಉಂಟು ಮಾಡಿದೆಯೆಂಬ ನಿರ್ಣಯವೊಂದನ್ನು ಅಧಿಕಾರಾರೂಢ ಹರಿಯಾಣ ಕಾಂಗ್ರೆಸ್ ಶಾಸಕರ ಪಕ್ಷದ ಸಭೆ ಸರ್ವಾನುಮತದಿಂದ ಅನುಮೋದಿಸಿತು.
ಎರಡು ವರ್ಷಗಳಲ್ಲಿ ಭೂರಹಿತರಿಗೆ ಸರ್ಕಾರಿ ಜಮೀನು
ಬೆಂಗಳೂರು, ಫೆ. 2– ಇನ್ನು ಎರಡು ವರ್ಷಗಳಲ್ಲಿ ಭೂರಹಿತರಿಗೆ ಸರ್ಕಾರಿ ಜಮೀನನ್ನು ಹಂಚಬೇಕೆಂದು ಸರ್ಕಾರ ಉದ್ದೇಶಿಸಿದೆಯೆಂದು ಕಂದಾಯ ಸಚಿವಶ್ರೀ ಎಚ್.ವಿ.ಕೌಜಲಗಿ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಭೂರಹಿತರಿಗೆ ವಿಲೇ ಮಾಡಲು ರಾಜ್ಯದಲ್ಲಿ 11,95,009 ಎಕರೆ 27 ಗುಂಟೆ ಸರ್ಕಾರಿ ಜಮೀನು ದೊರೆಯುವ ಸಂಭವವಿದೆಯೆಂದು ಸಚಿವರು ಶ್ರೀ ಎಂ.ವಿ.ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರವಿತ್ತರು.
ಸಾಗುವಳಿಗಾಗಿ ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಎಕರೆ ಜಮೀನನ್ನು ಜನ ಅತಿಕ್ರಮ ಮಾಡಿದ್ದಾರೆಂದೂ ಅವರು ತಿಳಿಸಿದರು.