ರಾಯಪುರ, ನ. 13– ತಮ್ಮ ವಿವಾದಾತ್ಮಕ ಗ್ರಂಥ ‘ಅಗ್ನಿಪರೀಕ್ಷಾ’ವನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮತ್ತು ಇಲ್ಲಿನ ಸನಾತನ ಧರ್ಮೀಯರ ಭಾವನೆಗೆ ಕುಂದುಂಟು ಮಾಡಿರುವ ಪದಗಳನ್ನು ಹಾಗೂ ವಾಕ್ಯಗಳನ್ನು ಪುಸ್ತಕದಿಂದ ತೆಗೆದುಹಾಕುವ ತಮ್ಮಿಚ್ಛೆಯನ್ನು ಜೈನಮುನಿ ಆಚಾರ್ಯ ತುಳಸಿ ಅವರು ವ್ಯಕ್ತಪಡಿಸಿದ್ದಾರೆ.
ಸಮಾಧಾನ ಸಮಿತಿಯ ಉಪಾಧ್ಯಕ್ಷ ಶ್ರೀ ದೇವೇಂದ್ರ ಕುಮಾರ್ ಗುಪ್ತಾ ಮತ್ತು ಕಾರ್ಯದರ್ಶಿ ಶ್ರೀ ಎಸ್. ಗೋಪಾಲಶಾಸ್ತ್ರಿ ಅವರಿಗೆ ಆಚಾರ್ಯ ತುಳಸಿ ಅವರು ನಿನ್ನೆ ಈ ಅಂಶ ತಿಳಿಸಿದರು. ಆರ್.ಆರ್. ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಧಾರ್ಮಿಕ ಮುಖಂಡರ ಸಮ್ಮೇಳನದಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.
ಸಂಸತ್ ಅಥವಾ ಪ್ರತ್ಯೇಕ ಆಯೋಗ ಪರಿಶೀಲನೆಗೆ ಮಹಾಜನ್ ವರದಿ?
ನವದೆಹಲಿ, ನ. 13– ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ ವಿವಿಧ ಪರ್ಯಾಯ ಸೂತ್ರಗಳನ್ನು ಇನ್ನೂ ಪರಿಶೀಲಿಸುತ್ತಿದೆ.
ವಿವಾದವನ್ನು ಸಂಸತ್ ಉಪಸಮಿತಿಯೊಂದಕ್ಕೆ ವಹಿಸುವ ಸಲಹೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದ್ದು, ಮಹಾಜನ್ ವರದಿಯನ್ನು ಸಂಸತ್ತಿಗೋ ಅಥವಾ ಹೊಸ ಆಯೋಗವೊಂದಕ್ಕೋ ವಹಿಸುವ ಇತರ ಸಾಧ್ಯತೆಗಳನ್ನು ಪೂರ್ಣವಾಗಿ ತಿಳಿಯುವವರೆಗೆ ಅಂತಹ ಕ್ರಮ ತೆಗೆದುಕೊಳ್ಳುವ ಸಂಭವವಿಲ್ಲವೆಂದು ಅಧಿಕೃತ ವಲಯಗಳಿಂದ ಗೊತ್ತಾಗಿದೆ.