ಬೆಂಗಳೂರು, ನ. 29–‘ರಾಜ್ಯದಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ನಾಯಕತ್ವ ಬದಲಾಗಬೇಕು; ಇದು ನಮ್ಮ ಬಿಡದ ಪಟ್ಟು’ ಹೀಗೆಂದವರು ಭಿನ್ನಮತೀಯ ಗುಂಪಿನ ನಾಯಕರಾದ ವೈಜನಾಥ ಪಾಟೀಲ್.
‘ಈ ಬಾರಿ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂಬ ವಿಚಾರದಲ್ಲಿ ಯಾವುದೇ ರಾಜಿಯೂ ಇಲ್ಲ. ಅದಕ್ಕೆಂದೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಿ ಮನವಿ ಕೊಟ್ಟಿದ್ದೇವೆ. ಈ ಸಭೆ ಕರೆಯುವಂತೆ ಒತ್ತಾಯಿಸುವುದು ಶಾಸಕರಾಗಿ ನಮ್ಮ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದು ಅವರು ಈ ಸಂಬಂಧ ಕೇಳಿಬಂದಿರುವ ಟೀಕೆಗೆ ಪ್ರತಿಕ್ರಿಯಿಸಿದರು.
ಶಾಸಕಾಂಗ ಪಕ್ಷದ ನಾಯಕತ್ವದಲ್ಲಿ ಅವಿಶ್ವಾಸ ವ್ಯಕ್ತಪಡಿಸಿ ಶಾಸಕಾಂಗದ ಸಭೆ ಕರೆಯುವಂತೆ ಮುಖ್ಯಮಂತ್ರಿ ಜೆ.ಎಚ್.ಪಟೇಲರನ್ನು ಒತ್ತಾಯಿಸಿರುವ 23 ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾ ರೋಪಾಯ ರೂಪಿಸುವುದಕ್ಕಾಗಿ ರಚನೆ ಆಗಿದೆ ಎನ್ನಲಾದ ಸಚಿವ ಸಮಿತಿಯ ವಿಚಾರ ತಮಗೆ ಇನ್ನೂ ಅಧಿಕೃತವಾಗಿ ಗೊತ್ತಾಗಿಲ್ಲ ಎಂದರು.
ಸರ್ವನದಿ ಸಂಪರ್ಕ ಅಧ್ಯಯನಕ್ಕೆ ಸಮಿತಿ ರಚನೆ: ಪ್ರಧಾನಿ
ನವದೆಹಲಿ, ನ. 29 (ಪಿಟಿಐ)– ದೇಶದ ಪ್ರಮುಖ ನದಿಗಳನ್ನು ಸೇರಿಸಿ ಕೊರತೆಯುಳ್ಳ ಪ್ರದೇಶಗಳಿಗೆ ನೀರು ಪೂರೈಸುವ ಬಗೆಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ ಎಂದು ಪ್ರಧಾನಿ ಎಚ್.ಡಿ. ದೇವೇಗೌಡರು ಇಂದು ಲೋಕಸಭೆಗೆ ತಿಳಿಸಿದರು.