ನವದೆಹಲಿ, ಜ. 23– ನ್ಯಾಯಾಲಯದ ಆದೇಶದ ಮೇರೆಗೆ ಬಾಬ್ರಿ ಮಸೀದಿ ಬಾಗಿಲುಗಳನ್ನು ತೆರೆಯಲಾಗಿದೆ ಹಾಗೂ ಸಂಬಂಧಪಟ್ಟ ಎಲ್ಲಾ ಪಕ್ಷಗಳ ಒಪ್ಪಂದದ ಮೇಲೆ ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಇಂದು ಅಯೋಧ್ಯೆ ವಿಷಯವನ್ನು ಸಮರ್ಥಿಸಿಕೊಂಡಿದೆ.
ಯಾವುದೇ ಪಕ್ಷದ ಹೆಸರನ್ನು ಹೇಳದೆ, ಈ ಎರಡು ಘಟನೆಗಳು ಯಾವುದೇ ಒಂದು ಪಕ್ಷದ ಏಕಾಏಕಿ ಕ್ರಮವಲ್ಲ ಎಂದು ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ನಿತ್ಯದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜೀವ್ ಗಾಂಧಿ ಜೀವಂತವಾಗಿದ್ದರೆ ಮಸೀದಿ ನಾಶಕ್ಕೆ ಅವಕಾಶ ಕೊಡುತ್ತಿರಲಿಲ್ಲ ಎಂದು ಸೋನಿಯಾ ಗಾಂಧಿ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ನೀಡಿದ್ದ ಹೇಳಿಕೆಗೆ ಸಮಾಜವಾದಿ ಪಕ್ಷವು ಟೀಕಿಸಿದ್ದಕ್ಕೆ ಈ ಉತ್ತರ ನೀಡಲಾಗಿದೆ.
ಬೊಫೋರ್ಸ್ ದಾಖಲೆ ಬಹಿರಂಗ ಬೇಡಿಕೆಗೆ ಪ್ರಧಾನಿ ನಕಾರ
ಜಲಂಧರ್, ಜ. 23 (ಪಿಟಿಐ)– ಬೊಫೋರ್ಸ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗ ಪಡಿಸಬೇಕೆಂಬ ಬೇಡಿಕೆಯನ್ನು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಇಂದು ಇಲ್ಲಿ ತಿರಸ್ಕರಿಸಿದ್ದಾರೆ.
‘ಬೊಫೋರ್ಸ್ ಪ್ರಕರಣಕ್ಕೆ ಸಂಬಂಧಿ ಸಿದಂತೆ ಸ್ವಿಟ್ಜರ್ಲ್ಯಾಂಡ್ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಯಾವುದೇ ದಾಖಲೆ ಬಹಿರಂಗ ಪಡಿಸಲು ಸಾಧ್ಯವಿಲ್ಲವೆಂದು ಸಿಬಿಐ ಈಗಾಗಲೇ ಸ್ಪಷ್ಟಪಡಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.