ಹಗರಣಗಳ ತನಿಖಾ ವರದಿ ವಿವರ ಬಹಿರಂಗ ಸಲ್ಲ: ಗುಜ್ರಾಲ್ ನವದೆಹಲಿ, ಮೇ 24 (ಯುಎನ್ಐ)– ತನಿಖಾ ಸಂಸ್ಥೆಗಳು ತನಿಖಾ ವರದಿಗಳ ಪ್ರಮುಖ ಅಂಶಗಳನ್ನು ಮಾಧ್ಯಮಗಳಿಗೆ ರಹಸ್ಯವಾಗಿ ಬಹಿರಂಗಪಡಿಸದೆ ವಿಶ್ವಾಸಾರ್ಹತೆ ಉಳಿಸಿಕೊಳ್ಳುವತ್ತಮೌನವಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಐ.ಕೆ.ಗುಜ್ರಾಲ್ ಇಂದು ಇಲ್ಲಿ ಹೇಳಿದರು.
‘ಪರಿಣಾಮಕಾರಿ ಹಾಗೂ ಜವಾಬ್ದಾರಿಯುತ ಆಡಳಿತ’ ಕುರಿತ ಮುಖ್ಯಮಂತ್ರಿಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳ ಒಂದು ದಿನದ ಸಮ್ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತನಿಖಾ ಸಂಸ್ಥೆಗಳ ಇಂತಹ ತನಿಖಾ ವರದಿಗಳ ಸೋರಿಕೆಯು ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಗಳನ್ನು ದುರ್ಬಲಗೊಳಿಸಬಹುದು ಎಂದು ಸಿಬಿಐಯ ಹೆಸರನ್ನು ಉಲ್ಲೇಖಿಸದೆ ಪ್ರಧಾನಿ ಗುಜ್ರಾಲ್ ಅವರು ನುಡಿದರು.