ನವದೆಹಲಿ, ಜ. 12 (ಪಿಟಿಐ– ಯುಎನ್ಐ)– ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಇನ್ನು ಮುಂದೆ ಭಿಕ್ಷುಕರು ಹಾಗೂ ವಲಸೆ ಕಾರ್ಮಿಕರು ಕೂಡಾ ಸೇರ್ಪಡೆಯಾಗಲಿದ್ದಾರೆ. ಕೇಂದ್ರದ ಸಂಯುಕ್ತರಂಗ ಸರ್ಕಾರವು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಈ ಯೋಜನೆಯನ್ನು ಪ್ರಕಟಿಸಲಾಗುವುದು.
ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ, ಭಿಕ್ಷುಕರು ಹಾಗೂ ವಲಸೆ ಕಾರ್ಮಿಕರ ಸಹಿತ ಸುಮಾರು 35 ಕೋಟಿ ಜನರಿಗೆ ಪಡಿತರ ವ್ಯವಸ್ಥೆಯಡಿ ಅರ್ಧ ಬೆಲೆಗೆ ಅಕ್ಕಿ ಹಾಗೂ ಗೋಧಿಯನ್ನು ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವಿಸ್ತರಿಸಿದ ಇಎಸ್ಐ: ಕಾರ್ಮಿಕರಿಗೇ ಬೇಗುದಿ
ಬೆಂಗಳೂರು, ಜ. 12– ಕಾರ್ಮಿಕರ ವ್ಯಾಪಕ ಪ್ರತಿಭಟನೆಯ ನಡುವೆಯೂ ಕೇಂದ್ರ ಸರ್ಕಾರ ರಾಜ್ಯ ವಿಮಾ ಕಾರ್ಮಿಕರ (ಇಎಸ್ಐ) ವಂತಿಗೆಯನ್ನು ಹೆಚ್ಚಿಸಿದೆ.
ಹೊಸ ನೀತಿಯ ಪರಿಣಾಮವಾಗಿ ರಾಜ್ಯದಲ್ಲಿ ವಿಮಾ ಕಾರ್ಮಿಕರ ಯೋಜನೆ ವ್ಯಾಪ್ತಿಗೆ ಸುಮಾರು 10ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಒಳಪಡುತ್ತಾರೆ. ಈಗಾಗಲೇ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬಹುತೇಕ ಕಾರ್ಮಿಕರು ಮಿತಿ ಏರಿಕೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.