ಮಧ್ಯ ಪ್ರದೇಶದಲ್ಲಿ ಹೊಸ ಬಿಕ್ಕಟ್ಟು: ಎಸ್.ವಿ.ಡಿ. ತ್ಯಜಿಸಲು ಜನಸಂಘದ ನಿರ್ಧಾರ
ಭೋಪಾಲ್, ಅ. 5– ಮಧ್ಯ ಪ್ರದೇಶದ ಆಡಳಿತಾರೂಢ ಪಕ್ಷ ಸಂಯುಕ್ತ ವಿಧಾಯಕ ದಳದಲ್ಲಿ ಅತೃಪ್ತಿ, ಭಿನ್ನಾಭಿಪ್ರಾಯ ಮತ್ತೆ ತೀವ್ರ ಸ್ವರೂಪ ತಾಳಿದೆ.
ಎಸ್.ವಿ.ಡಿ.ಯಲ್ಲಿ ತಾನು ಕೇವಲ ನಿಷ್ಕ್ರಿಯ ವೀಕ್ಷಕನಾಗಿ ಕುಳಿತಿರುವುದಿಲ್ಲ. ಕೇಂದ್ರ ನಾಯಕತ್ವ ಅನುಮತಿ ಕೊಟ್ಟೊಡನೆಯೇ ಸಂಪುಟದಿಂದ ತಾನು ಹೊರಗೆ ಹೋಗುವುದಾಗಿ ಎಸ್.ವಿ.ಡಿ.ಯ ಅಂಗಪಕ್ಷ ಜನಸಂಘ ಇಂದು ಘೋಷಿಸಿತು.
ಉನ್ನತ ಶಿಕ್ಷಣ ಪುನರ್ರಚನೆಗೆ ಮನಃಪೂರ್ವಕ ಯತ್ನಕ್ಕೆ ಡಾ. ಜಾಕಿರ್ ಹುಸೇನ್ ಕರೆ
ಹೈದರಾಬಾದ್, ಅ. 5– ರಾಷ್ಟ್ರಪಿತನ ಜನ್ಮಶತಾಬ್ದಿಯ ಈ ವರ್ಷ ಉನ್ನತ ಶಿಕ್ಷಣದ ಪುನರ್ರಚನೆಗೆ ಮನಃಪೂರ್ವಕವಾಗಿ ಕಾರ್ಯ ಕೈಗೊಳ್ಳಬೇಕೆಂದೂ, ಈ ಗುರಿ ಮುಟ್ಟುವ ತನಕ ಎಲ್ಲಿಯೂ ನಿಲ್ಲಬಾರದೆಂದೂ ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಇಂದು ಭಾರತದ ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಮನವಿ ಮಾಡಿಕೊಂಡರು.
ಒಟ್ಟಿನಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಉನ್ನತ ಶಿಕ್ಷಣ ಸುಧಾರಣೆಗೆ ತೀವ್ರವಾದ, ವ್ಯಾಪಕ ಯತ್ನ ಆರಂಭಿಸಲು ಸಮಯ ನೋಡುತ್ತ ಕೂರಬಾರದು ಎಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸುತ್ತ ರಾಷ್ಟ್ರಪತಿ ನುಡಿದರು.
ತಿರುವನಂತಪುರ, ಅ. 5– ‘ಅಂಗಡಿಗಳನ್ನು ಮುಚ್ಚುವಂತೆ ಸಭಾಸದನಗಳನ್ನು ನಾವು ಮುಂದಕ್ಕೆ ಹಾಕಬೇಕಾದ ಪರಿಸ್ಥಿತಿಯಿದ್ದರೆ ಅದು ಅಪಾಯಕಾರಿ ಹಾಗೂ ಪ್ರಜಾಸತ್ತೆಯ ಅಂತ್ಯ’ ಎಂದು ಲೋಕಸಭೆಯ ಸ್ಪೀಕರ್ ಶ್ರೀ ಎನ್. ಸಂಜೀವರೆಡ್ಡಿಯವರು ಇಂದು ಇಲ್ಲಿ ವಿಧಾನ ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ತಿಳಿಸಿದರು.
ಶಿಕ್ಷಣ ಸಲಹಾ ಮಂಡಳಿ ಶಿಫಾರಸು: ಶಾಲೆಗಳಲ್ಲಿ ಕನ್ನಡದಲ್ಲಿ ಕಲಿತವರಿಗೆ ಕಾಲೇಜಿನಲ್ಲೂ ಅದೇ ಮಾಧ್ಯಮ ಕಡ್ಡಾಯ
ಬೆಂಗಳೂರು, ಅ. 5– ಹೈಸ್ಕೂಲುಗಳಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೊಂದಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಲ್ಲೂ ಅದೇ ಮಾಧ್ಯಮವನ್ನು ಮುಂದುವರೆಸುವಂತೆ ಒತ್ತಾಯಪಡಿಸಲಾಗುವುದು.