ಸ್ವತಂತ್ರ ಕಟಾಂಗದ ಅಂತ್ಯ: ವಿಶ್ವಸಂಸ್ಥೆ ಕ್ರಮ
ಲಿಯೋಪಾಲ್ಡ್ವಿಲ್, ಸೆ. 14 - `ಕಾಂಗೋದಲ್ಲಿ ಅಂತರ್ಯುದ್ಧ ನಡೆಯುವುದನ್ನು ತಡೆಗಟ್ಟಲೋಸುಗ ವಿಶ್ವರಾಷ್ಟ್ರ ಸಂಸ್ಥೆಯು ನಿನ್ನೆ ಕಾರ್ಯಾಚರಣೆ ನಡೆಸಿ ಕಟಾಂಗದ ಸ್ವಾತಂತ್ರ್ಯವನ್ನು ಅಂತ್ಯಗೊಳಿಸಿದ ನಂತರ, ಇಂದು ಎಲಿಜಬೆತ್ವಿಲ್ನಲ್ಲಿಯೂ, ಅಲ್ಲಿಗೆ 40 ಮೈಲಿಗಳ ದೂರದಲ್ಲಿರುವ ಜಾಡೊಟ್ವಿಲ್ನಲ್ಲಿಯೂ ವಿಶ್ವರಾಷ್ಟ್ರ ಸಂಸ್ಥೆ ಮತ್ತು ಕಟಾಂಗಗಳ ಸೈನ್ಯಗಳ ನಡುವೆ ಕದನ ನಡೆಯುತ್ತಲೇ ಇತ್ತು.
`ಸ್ವಜನ ಪಕ್ಷಪಾತಕ್ಕೆ ಅವಕಾಶ ಉಂಟಾಗದು~
ಬೆಂಗಳೂರು, ಸೆ. 14 - ಸರ್ಕಾರ ಮೂರನೇ ದರ್ಜೆಯ ನೌಕರರ ಆಯ್ಕೆಯ ಅಧಿಕಾರವನ್ನು ಪಬ್ಲಿಕ್ ಸರ್ವಿಸ್ ಕಮಿಷನ್ನಿನ ಕಾರ್ಯವ್ಯಾಪ್ತಿಯಿಂದ ತೆಗೆದು, ವಿಭಾಗ ಸಮಿತಿಗಳಿಗೆ ವಹಿಸಿ ಕೊಡುವುದರಿಂದ ಈ ನೌಕರರ ಆಯ್ಕೆಯಲ್ಲಿ ಸ್ವಜನ ಪಕ್ಷಪಾತಕ್ಕೆ ಅವಕಾಶವಾಗುವುದೆಂಬ ಭಯ ನಿರಾಧಾರವಾದುದೆಂದು ಮುಖ್ಯಮಂತ್ರಿ ಬಿ. ಡಿ. ಜತ್ತಿಯವರು ಇಂದು ವಿಧಾನ ಸಭೆಗೆ ತಿಳಿಸಿದರು.