ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದಿಗೆ ಕೇಳಿಕೆ: ಚವಾಣ್ ನಕಾರ
ನವದೆಹಲಿ, ಡಿ. 6– ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ರಾಜ್ಯಾಂಗದ 370ನೇ ವಿಧಿ ರದ್ದುಪಡಿಸಬೇಕೆಂಬ ಜನಸಂಘ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಒತ್ತಾಯವನ್ನು ಇಂದು ಲೋಕಸಭೆಯಲ್ಲಿ ಗೃಹಮಂತ್ರಿ ವೈ.ಬಿ. ಚವಾಣ್ ತಳ್ಳಿಹಾಕಿದರು.
ಕಲ್ಲಿಕೋಟೆ ಸಬ್ಜೈಲಿಗೆ ಕುಮಾರಿ ಅಜಿತಾ
ಕಲ್ಲಿಕೋಟೆ, ಡಿ. 6– ನಕ್ಸಲೀಯ ಚಳವಳಿಯ ಅಗ್ರನಾಯಕರಲ್ಲಿ ಒಬ್ಬರೆನ್ನಲಾದ ಕುಮಾರಿ ಅಜಿತಾ ಮತ್ತು ಇತರ ಐವರನ್ನು ಮಾನಂದವಾಡಿಯಿಂದ ಇಲ್ಲಿನ ಸಬ್ ಜೈಲಿಗೆ ಕಳುಹಿಸಲಾಯಿತು.
ಕುಮಾರಿ ಅಜಿತಾ ಅವರ ಕಾಲುಗಳ ಮೇಲೆ ಆಗಿರುವ ಹಲವಾರು ಗಾಯಗಳನ್ನು ಮಾನಂದವಾಡಿಯಲ್ಲಿ ನಿನ್ನೆ ವೈದ್ಯರೊಬ್ಬರು ಪರೀಕ್ಷಿಸಿದರು.
ಕಂಪನಿ ಕಾಣಿಕೆ ನಿಷೇಧ: ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ತರಲು ಒತ್ತಾಯ
ನವದೆಹಲಿ, ಡಿ. 6– ರಾಜಕೀಯ ಪಕ್ಷಗಳಿಗೆ ಕಂಪನಿಗಳು ಕಾಣಿಕೆ ನೀಡುವುದನ್ನು ನಿಷೇಧಿಸುವ ಯೋಜಿತ ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ತರಬೇಕೆಂದು ವಿರೋಧ ಪಕ್ಷಗಳ ಸದಸ್ಯರು ಇಂದು ಲೋಕಸಭೆಯಲ್ಲಿ ಒತ್ತಾಯಪಡಿಸಿದರು.
ರಾಜ್ಯದ ಮಾಧ್ಯಮಿಕ ಶಾಲೆಗಳಿಗೆಲ್ಲ ಪದವೀಧರ ಮುಖ್ಯೋಪಾಧ್ಯಾಯರನ್ನು ನೇಮಿಸಲು ಸರ್ಕಾರದ ಯೋಜನೆ
ಬೆಂಗಳೂರು, ಡಿ. 6– ರಾಜ್ಯದ ಮಾಧ್ಯಮಿಕ ಶಾಲೆಗಳಿಗೆಲ್ಲ ಪದವೀಧರರನ್ನು ಮುಖ್ಯೋಪಾಧ್ಯಾಯರನ್ನಾಗಿ ನೇಮಿಸುವ ಯೋಜನೆಯನ್ನು ರಾಜ್ಯ ಸರಕಾರ ಕೈಗೊಂಡಿದೆ.
ಒಂದರಿಂದ 7ನೇ ತರಗತಿವರೆಗಿನ 30 ಸಾವಿರ ಶಾಲೆಗಳು ಈಗ ರಾಜ್ಯದಲ್ಲಿವೆ.